Thursday, June 14, 2018

ಯಜಮಾನ ಯಾರು?

ಕೆಲವು ವರ್ಷಗಳ ಹಿಂದೆ, ಒಂದು ಸಂಸ್ಥೆ(ಕಂಪನಿ)ಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ. ಅಲ್ಲಿ, ನಮ್ಮದು ಒಂದು ದೊಡ್ಡ ತಂಡ. ಸುಮಾರು ಮುನ್ನೂರು ಜನದ ತಂಡ ಒಂದು ಗ್ರಾಹಕ (ಕ್ಲೈಂಟ್) ನಿಗೆ ಕೆಲಸ ಮಾಡ್ತಾ ಇದ್ವಿ. ತಂಡ ಅಂತ ಇದ್ದ ಮೇಲೆ ನಾಯಕ ಇರಲೇಬೇಕಲ್ಲವೇ! ನಮ್ಮ ಪೂರ್ತಿ ತಂಡದ ಉನ್ನತ ನಾಯಕತ್ವವನ್ನು ಒಬ್ಬರು ಕನ್ನಡದವರು ವಹಿಸಿದ್ದರು. ಅವರ ಪದನಾಮ (ಡೆಸಿಗ್ನೇಷನ್) ಅಕೌಂಟ್ ಡೈರೆಕ್ಟರ್ ಆಗಿತ್ತು. ಈ ಸ್ಥಾನ ತುಂಬಾ ಪ್ರಬಲ (ಪವರ್ಫುಲ್) ಹಾಗು ಪ್ರಭಾವಶಾಲಿ (influential) ಆಗಿತ್ತು. ಇವರ ತೀರ್ಮಾನವೇ ಅಂತ್ಯ.

ಮನುಷ್ಯ ಅಂದ ಮೇಲೆ ಅವರದೇ ಆದ ಬಲಾಬಲಗಳು (strengths & weakness) ಇರುತ್ತವೆ. ನಮ್ಮ ಡೈರೆಕ್ಟರ್ ಅವರು ನೇರ (straightforward ) ಹಾಗು ದಿಟ್ಟ (daring ). ತುಂಬಾ ಜನರಿಗೆ ಇದು ಇಷ್ಟ ಆಗ್ತಾ ಇರಲಿಲ್ಲ. ಮಾತಿನಲ್ಲಿ ತುಂಬಾ ಚಾಣಾಕ್ಷರಿದ್ದರು. ವಾದಗಳಲ್ಲಿ ಇವರನ್ನು ಗೆಲ್ಲುವುದಕ್ಕೆ  ಆಗುತ್ತಿರಲಿಲ್ಲ. ತಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನು ಸೋಲಿಸಿ ತಮಗೆ ಏನು ಸರಿ ಅನ್ನಿಸುತ್ತೋ ಅದನ್ನು, ಇಲ್ಲ ತಮಗೆ ಹೇಗೆ ಬೇಕೋ ಹಾಗೆ ಕೆಲಸವನ್ನು ಹಾಗು ತಂಡವನ್ನು ಮುನ್ನಡೆಸುತ್ತಿದ್ದರು. ತಮಗೆ ಇಷ್ಟ ಇಲ್ಲದವರ ತಪ್ಪುಗಳನ್ನು ಎತ್ತಿ, ಅವರ ಕೆಲಸಕ್ಕೆ ಅಡ್ಡಿ ಅಡಚಣೆಗಳನ್ನು ಮಾಡುವುದರಲ್ಲೂ ಇವರು ನಿಸ್ಸೀಮರಾಗಿದ್ದರು. ಹಾಗೆ, ತಮ್ಮ ಕೆಳಗಿದ್ದವರನ್ನು ಬೇರೆ ಪಾಲುದಾರರಿಂದ (stakeholders ) ಆಗುವ ಮಾತಿನ ದಾಳಿಗಳಿಂದ ರಕ್ಷಿಸುತ್ತಿದ್ದರು. ಕೆಲವರಿಗೆ ಇವರೆಂದರೆ ಭಯ. ಎಲ್ಲಿ ಯಾವಾಗ ತೊಂದರೆ ಒಡ್ಡುತ್ತಾರೋ ಎಂದು. ಕೆಲವರು, ಇವರಿಗೆ ಹೇಗೆ ಬೇಕೋ ಹಾಗೆ ನಡೆದುಕೊಂಡು, ತೊಂದರೆಗಳನ್ನು ಬರದಂತೆ ನಿಭಾಯಿಸುತ್ತಿದ್ದರು. ಒಟ್ಟಿನಲ್ಲಿ ಇವರ ಪ್ರಾಬಲ್ಯ ಹೆಚ್ಚಿತ್ತು. ಇವರಿಗೆ ಬೇಕಾದಂತೆ ಬೇರೆಯವರು ನಡೆಯಬೇಕಿತ್ತು.

ಸಾಂಧರ್ಭಿಕವಾಗಿ ನಮ್ಮ ಡೈರೆಕ್ಟರ್ ಹಾಗು ನಾನು ಮತ್ತು ಕೆಲ ಕನ್ನಡಿಗರು ಇವರೊಡನೆ ವಯುಕ್ತಿಕ ಮಾತುಕಥೆಗಳಾಡುತ್ತಿದ್ದೆವು. ಕನ್ನಡದವರು ಕಮ್ಮಿ ಇದ್ದಕಾರಣ, ನಾವು ಕನ್ನಡದ ಒಂದು ಸಣ್ಣ ಗುಂಪು ಮಾಡಿ ಕೊಂಡು ಕನ್ನಡ ಸಾಹಿತ್ಯ ಸಿನೆಮಾ ಈ ತರದ ಮಾತುಕತೆಗಳು ನಡೆಯುತ್ತಿದ್ದವು.

ಕಾರ್ಪೊರೇಟ್ ಜಗತ್ತಲ್ಲಿ, 'lonely up the ladder ' ಅಂತ ಒಂದು ಹೇಳಿಕೆ ಇದೆ. ಅಂದರೆ, ಕಾರ್ಪೊರೇಟ್ ಜಗತ್ತಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾ ಹೋಗುತ್ತಾ ಒಬ್ಬಂಟಿ ಆಗ್ತಾನೆ ಮನುಷ್ಯ ಅಂತ. ಹಾಗೆ, ನಮ್ಮ ಡೈರೆಕ್ಟರ್ ಗೂ ಕೂಡ ಕಚೇರಿಯಲ್ಲೂ ಸ್ನೇಹಿತರು ಅಂತ ಇರಲಿಲ್ಲ. ಅವರ ಸ್ಥಾನಕ್ಕೆ ಅವರು ಎಲ್ಲರೊಡನೆ ಸೀದಾ ಸಾದಾ ಮಾತಾಡಕ್ಕೆ ಆಗ್ತಿರಲಿಲ್ಲ. ಅವರಿಗೆ ಕನ್ನಡ ಪುಸ್ತಕ ಓದೋ ಹವ್ಯಾಸ ತುಂಬಾ ಇದ್ದ ಕಾರಣ ನಾನು ಹಾಗು ನನ್ನ ಸ್ನೇಹಿತರೊಬ್ಬರು ಸ್ವಲ್ಪ ಆತ್ಮೀಯವಾಗಿದ್ದೆವು. ಹೀಗೆ ಮಾತಾಡೋ ಕೆಲವು ದಿನಗಳಲ್ಲಿ ಹೀಗೊಂದು ಕಥೆ ಹೊರಗೆ ಬಂತು.

ಆ ದಿನ ನಾವು ಹೆಣ್ಣು ಗಂಡು ಸಮಾನತೆಯ ವಿಷಯಮಾತಾಡುತ್ತಿದ್ದೆವು. ನಮ್ಮ ಡೈರೆಕ್ಟರ್ ಅವರು ತಮ್ಮ ಒಂದು ಅನುಭವವನ್ನು ಸಂಕೋಚವಾಗೇ ಹಂಚಿಕೊಂಡರು.

ಅವರು ತಮ್ಮ ಐದನೇ ತರಗತಿಯಲ್ಲಿ ಓದುತ್ತಿರುವ ಮಗನಿಗೆ 'ಮೆಸೊಪಟಾಮಿಯಾ ನಾಗರೀಕತೆ'ಯ ಬಗ್ಗೆ ವಿವರಿಸುತ್ತಿದ್ದರಂತೆ. ಏಷ್ಯಾ ಖಂಡದಲ್ಲಿ ಈ ನಾಗರೀಕತೆ ೧೫೦ ಕ್ರಿಸ್ತ ಪೂರ್ವ ಇತ್ತು. ವ್ಯವಸಾಯ ಮತ್ತು ಗಣಿತ ಇಲ್ಲಿಂದಲೇ ಪ್ರಾರಂಭವಾಯಿತು. 'ತಂದೆಯೇ ಮನೆಯ ಯಜಮಾನ' (ಫಾದರ್ ಐಸ್ ದಿ ಹೆಡ್ ಆ ದಿ ಫ್ಯಾಮಿಲಿ ). ಹೀಗೆ ಕೆಲವು ಪಾಯಿಂಟ್ಸ್ ಹೇಳಿದ್ದಾರೆ. ಹೇಳಿ ಮುಗಿಸಿದ ಮೇಲೆ, ಮಗ ಮುಸಿಮುಸಿ ನಕ್ಕಿದ್ದಾನೆ. ಇವರು ಪುಸ್ತಕದಿಂದ ತಲೆ ಎತ್ತಿ ನೋಡಿದ್ದಾರೆ. ಮಗನ ಮುಖದಲ್ಲಿ ಕೆಣಕುವ ಕಿರು ನಗೆ. "ಯಾಕೋ ಮಗ, ನಗ್ತಾ ಇದ್ದೀಯ. ಇದ್ರಲ್ಲಿ ನಗೋ ಅಂತಾದ್ದು ಏನಿದೆ?" ಅಂದಿದ್ದಾರೆ. ಮಗ, "ಅಪ್ಪ, ಮೆಸೊಪಟಾಮಿಯಾ ನಾಗರೀಕತೆ ನಮ್ಮನೇಲಿ ಇಲ್ಲ ಅಲ್ವ ಅಪ್ಪ. ಇಲ್ಲಿ ಅಮ್ಮನೇ ಅಲ್ವ ಮನೆ ಯಜಮಾನಿ!" ಇವರಿಗೆ ಒಂದೆಡೆ ನಗು, ಇನ್ನೊಂದೆಡೆ ಐದನೇ ತರಗತಿಯಲ್ಲಿರೋ ಮಗ ಅದೆಷ್ಟು ಮನೆಯ ವ್ಯವಹಾರ ಮಾತುಕಥೆಗಳನ್ನ ಗಮನಿಸಿದ್ದಾನೆ ಅನ್ನೋ ಆಶ್ಚರ್ಯ. ಮಗನ ನಗುವಿಗೆ ತಮ್ಮದೂ ನಗು ಸೇರಿಸಿ ಪಾಠವನ್ನು ಮುಗಿಸಿದ್ದಾರೆ.

ಇನ್ನೊಂದು ಸಂಧರ್ಭವನ್ನು ಹೇಳಿಕೊಂಡರು. ಅವರು, ಸಂಸಾರ ಸಮೇತ, ತಮ್ಮ ಅಣ್ಣನ ಮನೆಗೆ ಹಳ್ಳಿಗೆ ಹೋಗಿದ್ರಂತೆ. ಅಣ್ಣನ ಮನೆಯಲ್ಲಿ, ಹಿಂದೆ ಇದ್ದಂತೆ ಪುರುಷ ಪ್ರಧಾನ ವ್ಯವಸ್ಥೆ. ಹಾಗಾಗಿ, ಇವರ ಅಣ್ಣ ಹೇಳಿದ್ದೆ ಮಾತು, ನಡೆದದ್ದೇ ದಾರಿ.

ಮನೆ ಹೊರಗೆ ಕೆಲಸದವರು ಅಡಿಕೆ ಕೆಲಸ ಮಾಡ್ತಾ ಇದ್ದರಂತೆ. ನಮ್ಮ ಡೈರೆಕ್ಟರ್ ವರಾಂಡದಲ್ಲಿ ಕೂತು, ಕೆಲಸವನ್ನು ನೋಡುತ್ತಾ , ಒಳಗೆ ಆಡುತ್ತಿದ್ದ ಮಗನಿಗೆ "ದೊಡ್ಡಪ್ಪನ್ನ ಕರಿಯೋ: ಅಂದಿದಾರೆ
ಮಗ: "ಅಪ್ಪ ಅವರು ಮಲಗಿದ್ದಾರೆ"
ಡೈರೆಕ್ಟರ್: "ಎಬ್ಬಿಸು"
ಮಗ: "ಇಲ್ಲಪ್ಪ , ಬೈತಾರೆ ಎಬ್ಬಿಸಿದ್ರೆ, ನಾನು ಎಬ್ಬಿಸಲ್ಲ"
ಡೈರೆಕ್ಟರ್: "ದೊಡ್ಡಮ್ಮಂಗೆ ಹೇಳು, ಎಬ್ಬಿಸಕ್ಕೆ"
ಮಗ: "ಬೇಡಪ್ಪ.. "
ಡೈರೆಕ್ಟರ್: "ಯಾಕೋ?"
ಮಗ: "ಅಪ್ಪ ಇಲ್ಲಿ ನಮ್ಮನೆ ತರ ಅಲ್ಲ.. ಎಲ್ಲ ಉಲ್ಟಾ.. "
ಡೈರೆಕ್ಟರ್: "ಏನೋ ಹಂಗಂದ್ರೆ?"
ಮಗ: "ಎಲ್ಲಕ್ಕೂ ದೊಡ್ಡಪ್ಪ ದೊಡ್ಡಮ್ಮನ್ನ ಬೈತಾರಪ್ಪ"
ಕೆಲಸದವರೆಲ್ಲ ಕಿಸಕ್ಕನ್ನೆ ನಕ್ಕಿದ್ದಾರೆ.. ಇವರು, ಕೆಲಸದವರಿಗೆ ರೇಗಿ " ಗಮನ ಇಟ್ಟು ಸರೀಗೆ ಕೆಲಸ ಮಾಡಿರೋ " ಅಂದು ಎದ್ದು ಬಂದಿದ್ದಾರೆ.

ಎಷ್ಟೋ ವೇಳೆ ಮನುಷ್ಯ ತನ್ನ ವೃತ್ತ್ತಿಜಗತ್ತಿನಲ್ಲಿ ವಯುಕ್ತಿಕ ಬದುಕಿಗಿಂತ ತುಂಬಾ ಭಿನ್ನವಾಗಿ ಇರ್ತಾನೆ.  ಕೆಲವೊಮ್ಮೆ ಜನನ್ನ ನಾವು ಜಡ್ಜ್ ಮಾಡಿಬಿಡ್ತೇವೆ.

ನಮ್ಮ ಸಹುದ್ಯೋಗಿಗಳು, ನಮ್ಮ ಡೈರೆಕ್ಟರ್ ವಯುಕ್ತಿಕ ಬದುಕಿನ ಬಗ್ಗೆ ಊಹಿಸ್ಕೊತಾ ಇದ್ರು. ಇವರ ಜೊತೆ  ಇವರ ಹೆಂಡತಿ ಮಕ್ಕಳು ಹೇಗೆ ಬದುಕ್ತಾರಪ್ಪ ಅಂತ !

ದೀಪದ ಬುಡದಲ್ಲಿ ಯಾವಾಗ್ಲೂ ಕತ್ತಲೇನೆ ತಾನೇ?


1 comment:

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...