Saturday, December 15, 2018

ಪರಿ ಪರಿ ಪರೀಕ್ಷೆ

ಇಂಟರ್ನಲ್ಸ್ ಮುಗ್ಸಾಯಿತಲ್ಲ. ಈಗ ಮುಖ್ಯ ಪರೀಕ್ಷೆಗೆ ಬರೋಣ. ಹಿಂದಿನ ಪೋಸ್ಟ್ ಅಲ್ಲಿ ಹೇಳಿದ ಹಾಗೆ, ಪರೀಕ್ಷೆ ಹತ್ತಿರ ಬರ್ತಾ ಇದ್ದ ಹಾಗೆ ಹುಡುಗ ಹುಡುಗಿಯರ ಅವತಾರಗಳು ಬೇರೆ ಆಗ್ತಾ ಇತ್ತು.
ಪರೀಕ್ಷೆಗೆ ಮುಂಚೆ ಓದಿಕೊಳ್ಳುವುದಕ್ಕೆ ಅಂತ ಸುಮಾರು ದಿನ ರಜಾ ಕೊಡೋರು. ಹೊರ ಊರಿಂದ ಓದಲು ಬಂದ  ಕೆಲವರು, ತಮ್ಮೂರಿಗೆ ಹೊರಟುಬಿಡುತ್ತಿದ್ದರು. ಸುಮಾರು ಜನ ವಿದ್ಯಾರ್ಥಿನಿಲಯದಲ್ಲೇ ಉಳಿದು ಓದೋರು.

ಈ ಅವಧಿಯಲ್ಲಿ ಹಾಗೂ ಪರೀಕ್ಷಾ ದಿನಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಲಯದಲ್ಲಿ ಇರ್ತಿದ್ದ ಹುಡುಗಿಯರು, ತಲೆ ತುಂಬಾ ಎಣ್ಣೆ ಹಚ್ಚಿ(ಬೇರೆ ಸಮಯದಲ್ಲಿ, ಕೂದಲಿಗೆ ಎಣ್ಣೆ ವಾಸನೇನು ಸೋಕಿರಲಿಕ್ಕಿಲ್ಲ) ಕೂದಲು ಗಂಟು ಹಾಕಿ(ಬೇರೆ ದಿನಗಳಲ್ಲಿ ಹೊರಗಡೆ ಬಂದಾಗ, ಕೂದಲು ಕಟ್ಟಿರಲಿಕ್ಕೆ ಇಲ್ಲ)  ಆ ಗಂಟಿಗೊಂದು ಪೆನ್  ಸಿಕ್ಕಿಸಿ, ಒಂದು ಕೈಯಲ್ಲಿ ಪುಸ್ತಕ ಹಿಡಿದು ಓಡಾಡೋದು.

ಹುಡುಗರ ಅವತಾರ ಇನ್ನೊಂದು ತರ. ಹಾಕಿದ್ದ ಬಟ್ಟೆನೆ ಹಾಕುತ್ತಾ(ಒಗೆಯದೆ ), ಮೀಸೆ, ಗಡ್ಡ ಬೋಳಿಸದೆ, ರಾತ್ರೋ ರಾತ್ರಿ ಟೀ ಅಂಗಡಿಗೆ ಹೋಗಿ ಟೀ ಕುಡಿಯೋದು.

ಈ ಅವತಾರದ ಅವಕಾಶಗಳು, ವಿದ್ಯಾರ್ಥಿನಿಲಯದದಲ್ಲಿ ನೆಲೆಸಿದವರಿಗೆ ಮಾತ್ರ. ಮನೆಯಲ್ಲಿದ್ದವರಿಗೆ ಈ ತರದ ವೇಷ ಭೂಷಣಗಳ ಅವಕಾಶ ಇರಲಿಲ್ಲ. 

ಪರೀಕ್ಷೆಗೆ ಬರೋ ದಾರಿಯಲ್ಲೂ ಕೆಲವರು ಪುಸ್ತಕ ಓದಿಕೊಂಡೆ ಬರೋರು. ಆರು ತಿಂಗಳಲ್ಲಿ ಓದಿ ಕಲಿಯಕ್ಕೆ ಆದ/ಆಗದ್ದನ್ನು, ಪರೀಕ್ಷೆಗೆ ಬರೋ ದಾರಿಯಲ್ಲಿ ಓದಿ, ಹೇಗೆ ತಿಳಿಯುತ್ತಿದ್ದರೋ, ನೆನಪಿಟ್ಟುಕೊಳ್ಳುತ್ತಿದ್ದರೋ  ನನಗೆ ಇನ್ನೂ ಅರ್ಥ ಆಗಿಲ್ಲ.

ಹೀಗೆ ಒಂದು ಪರೀಕ್ಷೆಯ ದಿನ. ಪರೀಕ್ಷೆ ಮುಗಿಸಿ, ಹೊರಬಂದಾಗ ನನ್ನ ಒಬ್ಬ ಸಹಪಾಠಿ ಗೋಳಾಡ್ತಾ ಇದ್ದ. ಮಂಗಳೂರು ಕಡೆಯವ ಗೊಳೋ ಅಂತಿದಾನೆ, "ಎಂತ ಸಾವು ಮಾರಾಯ ನಂದು. ಆ ಹುಡುಗಿ ನನ್ನ ಬಾಳನ್ನೇ ಹಾಳು ಮಾಡಿಬಿಟ್ಲು! "

ನಾನು ಇದೇನಪ್ಪ, ಎಲ್ಲ ಪರೀಕ್ಷಾ ಕೊಠಡೀಲೆ ಇದ್ದೆವಲ್ಲ. ಇವನಿಗೆ ಯಾವ ಹುಡುಗಿ ಏನು ಮಾಡಿದಳು ಅನ್ಕೊಂಡೆ.
ಅವನು ಮುಂದುವರೆಸಿದ, ತನ್ನ ಗೋಳನ್ನ. "ನಾನು ಬರೆದದ್ದು ಉತ್ತರ ಸರಿ ಇತ್ತು ಮಾರಾಯ. ಅವಳು ಬರೆದದ್ದು ನೋಡಿ, ನಾನು ಬರೆದ ಉತ್ತರ ತಪ್ಪು  ಎಂದು ತಿಳಿದು, ಅದು ಹೊಡೆದು ಹಾಕಿ, ಅವಳ ಬರೆದ ಉತ್ತರ  ಬರೆದೆನಲ್ಲ ಮಾರಾಯ! ಅವಳು ಟಾಪರ್ ಅಂತ ನಂಬಿದ್ದೆ ತಪ್ಪಾಯಿತು. ಗೊತ್ತಿದ್ದದ್ದೇ ಅದೊಂದು ಉತ್ತರ. ಈಗ ಪಾಸಾಗೋದೇ ಕಷ್ಟ ಉಂಟಲ್ಲ, ಎಂತದು ಮಾಡೋದು!"

ಕರ್ಮಕ್ಕೆ, ಜನ ತಮಗಿಂತ  ಬೇರೆಯವರ ಮೇಲೆ ವಿಶ್ವಾಸ ಇಟ್ಟರೆ ಹೀಗೆ ಆಗೋದು!

ಇನ್ನೊಂದು ಸೆಮಿಸ್ಟರ್ ಅಲ್ಲಿ, ಎಲೆಕ್ಟ್ರಿಕಲ್ ಡ್ರಾಯಿಂಗ್ ಪರೀಕ್ಷೆ ಇತ್ತು. ಪ್ರೆಶ್ನೆ ಪತ್ರಿಕೆ ನೋಡಿದ ಮೇಲೆ ನನಗೆ ಸುಮಾರು ೬೦ ಅಂಕಿಗಳು ಬರೋದರಲ್ಲಿ ಅನುಮಾನ ಇಲ್ಲ ಅನ್ನಿಸಿತು. ನಿಧಾನಕ್ಕೆ ಬರುವ ಎಲ್ಲ ಪ್ರಶ್ನೆಗಳಿಗೂ ಚೆನ್ನಾಗಿ ಚಿತ್ರ ಬಿಡಿಸಿ, ಉತ್ತರ ಬರೆದು ಬಂದಿದ್ದೆ. ಫಲಿತಾಂಶದ ದಿನ ಪಾಸಾದವರ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ನೋಡಿದರೆ, ಎಲೆಕ್ಟ್ರಿಕಲ್ ಡ್ರಾಯಿಂಗ್ ನಲ್ಲಿ ನಪಾಸಾಗಿದ್ದೆ. ಆಷ್ಟೇನು  ಬೇಸರ ಆಗ್ಲಿಲ್ಲ. ಹಿಂದಿನ ವರ್ಷದಲ್ಲಿ ೩ ವಿಷಯಗಳಲ್ಲಿ ನಪಾಸಾಗಿದ್ದರಿಂದ ಈ ಸಲ ಒಂದೇ, ಪರ್ವಾಗಿಲ್ಲ ಅನ್ಕೊಂಡೆ. ಗೆಳೆಯ ಗೆಳತಿಯರೆಲ್ಲರ ಫಲಿತಾಂಶ ವಿನಿಮಯ ಮಾಡ್ಕೋತಾ ಇದ್ದಾಗ, ನನ್ನ ಗೆಳತಿಯೊಬ್ಬಳು ತುಂಬಾ ಸಪ್ಪಗಿದ್ದಳು. ನಾನು, ಬಹುಷಃ ಎರಡು ಮೂರು ವಿಷಯ ಹೋಗಿರಬೇಕು. ಮಾತಾಡಿಸಿ ಸಮಾಧಾನ ಮಾಡೋಣ ಅಂತ ಹೋದೆ. "ಏನಾಯಿತು ಫಲಿತಾಂಶ? ಯಾಕೆ ಸಪ್ಪಗಿದ್ಯಾ?" ಅಂತ ಕೇಳಿದೆ. ಅವಳು, ತಲೆ ಅಲ್ಲಾಡಿಸಿದಳು. ನನಗೆ ಅರ್ಥ ಆಗದೆ, "ಫೇಲ್ ಆಗಿದ್ಯಾ? ಎಷ್ಟು ಸಬ್ಜೆಕ್ಟ್?" ಕೇಳಿದೆ. ನಂದು ಒಂದು ಹೋಗಿದೆ, ನಪಾಸಾದ್ರೆ, ಮುಂದಿನ ಸಲ ಒಟ್ಟಿಗೆ ಓದಿ ಪಾಸ್ ಮಾಡೋಣ ಅಂತ ಸಮಾಧಾನ ಮಾಡೋಣ ಅನ್ನೋ ಉದ್ದೇಶದಿಂದ. ಅವಳು, "ಇಲ್ಲ, ಎಲ್ಲ ಪಾಸ್ ಆಗಿದೆ" ಅಂದ್ಲು. ಇದೊಳ್ಳೆ ಕಥೆ ಆಯಿತಲ್ಲ ಈ ಹುಡುಗೀದು. ನಾನಿಲ್ಲಿ ಒಂದು ನಪಾಸಾಗಿ ಆರಾಮಾಗಿ ಇದ್ದೀನಿ. ಇವಳು ಎಲ್ಲ ಪಾಸಾಗಿ ಸಪ್ಪಗಿದ್ದಾಳೆ. ಸ್ವಲ್ಪ ಕಿರಿಕಿರಿ ಆಗಿ "ಮತ್ತೆ ಇನ್ನೇನು ನಿನ್ನ ಪ್ರಾಬ್ಲಮ್?" ಅಂದೆ. ಅದಕ್ಕವಳು, "ನೀನು ಎಲೆಕ್ಟ್ರಿಕಲ್ ಡ್ರಾಯಿಂಗ್ ಫೇಲ್ ಆಗಿದ್ಯಲ್ಲ" ಅಂದ್ಲು. ಅದಕ್ಕೆ ನಾನು, "ಅದು ಸರಿ, ನಾನು ಫೇಲ್ ಆಗಿದ್ದಕ್ಕೂ, ನೀನು ಸಪ್ಪಗಿರೋದಕ್ಕೂ ಏನು ಸಂಬಂಧ?"
ಅದಕ್ಕವಳು: " ಪೂರ್ತಿ ಪೇಪರ್ ನಿನ್ನ ಉತ್ತರ ಪತ್ರಿಕೆ ಇಂದ ಕಾಪಿ ಮಾಡಿದ್ದೆ. ನಾನು ಪಾಸಾಗಿದ್ದೀನಿ, ೬೦ ಬಂದಿದೆ ಮಾರ್ಕ್ಸ್ ಅದಕ್ಕೆ" ಅಂದಾಗ, ದಂಗಾಗಿ ಸಪ್ಪಗಾಗೋ ಸರದಿ ನಂದು!

ಹೀಗೆ ಪರೀಕ್ಷೆಗೆ ಹಿಂದೆ ಮುಂದೆ ಒಂದಲ್ಲ ಒಂದು ತರದ ಒತ್ತಡ ಇದ್ದೆ ಇರ್ತ ಇತ್ತು. ಪರೀಕ್ಷೆಗೆ ಮುಂಚೆ ಪರೀಕ್ಷೆ ಬರೀಬೇಕಲ್ಲ ಅನ್ನೋ ಒತ್ತಡ, ಬರೆದಾದ ಮೇಲೆ ಫಲಿತಾಂಶ ಏನಾಗತ್ತೋ ಅನ್ನೋ ಒತ್ತಡ.
ನಾಕನೇ ಸೆಮಿಸ್ಟರ್ ಫಲಿತಾಂಶ ಬಂದಿತ್ತು. ಕಂಟ್ರೋಲ್ ಸಿಸ್ಟಮ್ಸ್ ಅಲ್ಲಿ ವಿಸ್ಯಾರ್ಥಿಗಳಿಗೆ ವಿಷಯದಮೇಲೆ ಕಂಟ್ರೋಲ್ ಹೋಯಿತೋ, ಉಪನ್ಯಾಸಕರಿಗೆ ಕಂಟ್ರೋಲ್ ತಪ್ಪಿತೋ, ಒಟ್ಟು ಸುಮಾರು ಜನ ನಪಾಸಾಗಿದ್ದರು. ಅದೃಷ್ಟವಶಾತ್, ಆ ಸೆಮಿಸ್ಟರ್ ನಂದು ಎಲ್ಲ ಪಾಸ್ ಆಗಿತ್ತು.

ನಾನು ಪ್ರೌಢ ಶಾಲೆಯಲ್ಲಿ ಇದ್ದಾಗ, ನಮ್ಮ ಅಣ್ಣ ಏನೋ ಮಾತಾಡುತ್ತ, ಕಾಲೇಜಿಗೆ ಬಂದ ಮೇಲೆ ಕಲಿಯೋದಕ್ಕೆ  ಉಪನ್ಯಾಸಕರ ಮೇಲೆ ಅವಲಂಬಿಸಬಾರದು ಅಂತ ಹೇಳಿಬಿಟ್ಟಿದ್ದ. ನನಗಿಂತ ಒಂದೂವರೆ ವರ್ಷ ದೊಡ್ಡವನ ಮಾತನ್ನು ನಾನು ತುಂಬಾ ಗಂಭೀರವಾಗಿ ತೊಗೊಂಡು, ಪಿ.ಯು.ಸಿ. ಇಂದಾನೆ, ಪಾಠಕೇಳೋದನ್ನ ಬಿಟ್ಟಿದ್ದೆ. ಯಾವುದೋ ಕೆಲ ವಿಷಯಗಳು, ನನಗೆ ವಿಷಯ ತುಂಬಾ ಇಷ್ಟ ಆಗೋ, ಪಾಠ ಮಾಡೋರು ಇಷ್ಟ ಆದಾಗಲೂ ಕೇಳ್ತಾ ಇದ್ದೆ. ಶ್ರದ್ಧೆ ಇಂದ ನೋಟ್ಸ್ ಬರೀತಾ ಇರಲಿಲ್ಲ. ಕೊನೆ ಬೆಂಚ್ ಅಲ್ಲಿ ಕೂತು, ಚುಕ್ಕಿ ಆಟ ಆಡೋದೋ, ಅಥವಾ ಒಂದು ಹನಿಗವನನೋ, ಕವನನೊ ಗೀಚಿ ಚೀಟಿ ಪಾಸ್ ಮಾಡಿ ಓದುಗರ ಅಭಿಪ್ರಾಯಕ್ಕೆ ಕಾಯ್ತಾ ಕೂತಿರ್ತಾ ಇದ್ದೆ.

ಹೀಗಾಗಿ, ಎಲ್ಲ ಕಿರು ಮತ್ತೆ ಮುಖ್ಯ ಪರೀಕ್ಷೆಗಳಿಗೂ ಮೊದಲು, ನನ್ನ ಸಹಪಾಠಿಯೊಬ್ಬಳ ನೋಟ್ಸ್ ಜೆರಾಕ್ಸ್ ಮಾಡಿಸಿ ಓದ್ತಾ ಇದ್ದೆ. ಆ ಹುಡುಗಿಗೆ ಅಧ್ಯಯನದಲ್ಲಿ ತುಂಬಾ ನಿಷ್ಠೆ, ನಿಯತ್ತು. ಒಂದು ದಿನ ಪಾಠ ತಪ್ಪಿಸದೇ, ಮೊದಲ ಬೆಂಚ್ ಅಲ್ಲಿ ಕೂತು, ಪಾಠಗಳನ್ನು ಕೇಳಿಸಿಕೊಂಡು, ನೋಟ್ಸ್ ಬರೆಯೋಳು. ನಾನು ಪರೀಕ್ಷೆಗೆ ಸ್ವಲ್ಪ ದಿನ ಮುಂಚೆ ಹೋಗಿ, ಅವಳ ನೋಟ್ಸ್ ಜೆರಾಕ್ಸ್ ಮಾಡಿ ಟೆಕ್ಸ್ಟ್ ಬುಕ್ ಜೊತೆಗೆ ಓದ್ಕೋತ  ಇದ್ದೆ.

ಹಾಗೆ, ಐದನೇ ಸೆಮಿಸ್ಟರ್ ಮೊದಲ ಕಿರಿ ಪರೀಕ್ಷೆ ಘೋಷಿಸಿದ ದಿನ ಸಂಜೆ, ಅವಳ ವಿದ್ಯಾರ್ಥಿನಿಲಯಕ್ಕೆ ಹೋದೆ. ಅವಳ ಜೊತೆ ಹರಟೆ ಹೊಡೆದು ನೋಟ್ಸ್ ಕೇಳಿದೆ, ಜೆರಾಕ್ಸ್ ಗೆ. ಅಷ್ಟು ಹೊತ್ತು ಸರಿಗೆ ಮಾತಾಡಿಸಿದ ಅವಳು, ಇದ್ದಕ್ಕಿಂದ್ದಂತೆ ಸಿಟ್ಟು ಮಾಡಿಕೊಂಡು, "ಹೋಗೆಮ್ಮ ಅನಿತಾ, ಇನ್ನು ಮೇಲೆ ನೀನು ನನ್ನ ನೋಟ್ಸ್ ಕೇಳಬೇಡ, ನಾನು ಕೊಡಲ್ಲ" ಅಂದ್ಲು. ಎರಡು ವರ್ಷ ಕೊಟ್ಟವಳಿಗೆ ಈಗ ಏನಾಯಿತು ಅನ್ಕೊಂಡೆ. "ಯಾಕೆ, ಏನಾಯಿತು? ನಾ ಏನಾದ್ರು ತಪ್ಪು ಮಾಡಿದ್ನ?" ಅಂತ ವಿಚಾರಿಸಿದೆ. ಅದಕ್ಕವಳು: "ನೀನು ಸರೀಗೆ ಕ್ಲಾಸ್ಗೆ ಬರಲ್ಲ. ಬಂದ್ರೂ, ಪಾಠ ಕೇಳಲ್ಲ, ನೋಟ್ಸ್ ಬರ್ಕೊಳಲ್ಲ. ಪರೀಕ್ಷೆಗೆ ಮುಂಚೆ ಬಂದು ನನ್ನ ನೋಟ್ಸ್ ಜೆರಾಕ್ಸ್ ಮಾಡ್ಸಿ ಓದಿ, ನೀನು ಕಂಟ್ರೋಲ್ ಸಿಸ್ಟಮ್ಸ್ ಪಾಸ್ ಆಗ್ಬಿಟ್ಟೆ, ನಾನು ಫೇಲ್ ಆಗ್ಬಿಟ್ಟೆ" ಅಂದ್ಲು. ನಂಗೆ ಜೋರು ನಗು. ನಗೋ ಹಾಗೆ ಇಲ್ಲ. ನಕ್ಕರೆ ನೋಟ್ಸ್ ಸಿಗಲ್ಲ ಇನ್ಮೇಲೆ.

ನಾನು ಅವಳಿಗೆ ರಮಿಸಿ, ಸಮಾಧಾನ ಹೇಳಿ, "ಯಾರೋ ಸರಿಯಾಗಿ ಉತ್ತರ ಪತ್ರಿಕೆ ವ್ಯಾಲ್ಯೂಯೇಷನ್ ಮಾಡಿಲ್ಲ ಅನ್ಸತ್ತೆ ಕಣೆ. ನಾನೇ ಪಾಸ್ ಆದಮೇಲೆ ನೀನ್ ಹೇಗೆ ಫೇಲ್ ಆಗಕ್ಕೆ ಸಾಧ್ಯ ಹೇಳು." ಅಂತೆಲ್ಲ ಹೇಳಿ, ನೋಟ್ಸ್ ಇಸ್ಕೊಂಡು ಬಂದೆ ಅನ್ನಿ.

ಆದರೂ, ಅವಳು ಹೇಳಿದ್ದರಲ್ಲಿ ನ್ಯಾಯ ಇದೆ ಅಲ್ವಾ? ;)

ಇವೆಲ್ಲ ಮೇಲ್ನೋಟಕ್ಕೆ ಇಂಜಿನಿಯರಿಂಗ್ ವಿಷಯಗಳ ಪರೀಕ್ಷೆಗಳಾದರೂ, ನನ್ನನ್ನು ಮುಂಬರುವ ಜೀವನದ ವಿವಿಧ ಪರೀಕ್ಷೆಗಳಿಗೆ ಸಿದ್ಧ ಮಾಡಿದ ಹಾಗೆ ಅನ್ಸತ್ತೆ, ಹಿಂತಿರುಗಿ ನೋಡಿದಾಗ!

Copy ಮಾಡಿ ನೋಡಿ!!

ಕಾಲೇಜು ಅಂದಮೇಲೆ ಪರೀಕ್ಷೆ ಇದ್ದೇ ಇರುತ್ತೆ. ಪರೀಕ್ಷೆಗಳಲ್ಲಿ ಮೂರು ತರ. ಒಂದು ಇಂಟರ್ನಲ್ಸ್ - ಮುಖ್ಯ ಪರೀಕ್ಷೆಗೆ ಮುಂಚೆ ಕಿರು ಪರೀಕ್ಷೆಗಳು. ಎರಡನೆಯದು ಲ್ಯಾಬ್ ಪರೀಕ್ಷೆ. ಮೂರನೆಯದು ಮುಖ್ಯ ಪರೀಕ್ಷೆ. ವಿದ್ಯಾರ್ಥಿಗಳಾಗಿ ನಾವು ಒಂದೊಂದಕ್ಕೂ ಒಂದೊಂದು ತರ ಅವತಾರ, ಒಂದೊಂದು ತರ ತಯಾರಿ ಮಾಡ್ತಿದ್ವಿ. ಈ ಮುಕ್ತಕದಲ್ಲಿ, ಕಿರಿ ಪರೀಕ್ಷೆಯ ಅನುಭವಗಳನ್ನು ಹೇಳುವೆ.

ಇಂಟರ್ನಲ್ಸ್ ೨೫ ಅಂಕಗಳಿಗೆ ಇರ್ತಾ ಇತ್ತು. ೧೫/೨೫ ಬಂದರೆ ಸುರಕ್ಷಿತ ಅಂತ ಅರ್ಥ. ೩ ಇಂಟರ್ನಲ್ಸ್ ಬರೆದು,  ಅದರಲ್ಲಿ ಸರಾಸರಿ ಅಂಕಗಳನ್ನು ಕೊನೆ ಪರೀಕ್ಷೆಗೆ ಸೇರಿಸ್ಕೊತ ಇದ್ರು.

ಸುಮಾರು ವಿದ್ಯಾರ್ಥಿಗಳು ೧೫ ಅಂಕಗಳನ್ನು ಪಡೆಯಕ್ಕೆ ಗುರಿ ಇಡೋರು. ಹಾಗಾಗಿ, ತುಂಬಾ ತಲೆ ಕೆಡಿಸ್ಕೊಂಡು ಓದ್ತಾ ಇರಲಿಲ್ಲ. ಅದು ಅಲ್ಲದೆ ಸುಮಾರು ಜನ ನಕಲು (copy) ಮಾಡೋರು. ಅದ್ರಲ್ಲೂ ನಮ್ಮ  ಎಲೆಕ್ಟ್ರಿಕಲ್ ಬ್ರಾಂಚ್ ಅಂತೂ ತೂಕು ಹೊಡೆಯೋದಕ್ಕೆ ತುಂಬಾ ಪ್ರಸಿದ್ಧಿಯಲ್ಲಿತ್ತು. ಎಲ್ಲ ಹೊಸದಾಗಿ ಸೇರಿದ ಕಿರಿಯ ಸಹಪಾಠಿಗಳಿಗೆ, ಹಿರಿಯ ಸಹಪಾಠಿಗಳು, ಮೊದಲ ವರುಷ ಕೊಡುವ ಪ್ರಪ್ರಥಮ  ತರಬೇತಿಯೆಂದರೆ, ಬ್ರಾಂಚ್ ವಿಷಯಗಳು ಪ್ರಾರಂಭವಾದ ಮೇಲೆ ನಪಾಸಾದರೆ ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು. ತಮ್ಮ ಅನುಭವಗಳನ್ನು ಚಿತ್ರ ವಿಚಿತ್ರವಾಗಿ ಬಣ್ಣಿಸಿ, ಅರ್ಧ ತಾವು ನಪಾಸಾಗೋದಕ್ಕೆ ತಮ್ಮ ಉಪನ್ಯಾಸಕರನ್ನ ಜವಾಬ್ದಾರರನ್ನಾಗಿ ಮಾಡಿ ತಮ್ಮಅಪರಾಧೀ ಮನೋಭಾವವನ್ನು ಕಮ್ಮಿ ಮಾಡಿಕೊಳ್ಳುತ್ತ ಇದ್ದರು.

ನಮ್ಮಪ್ಪ, ಕೆ. ಇ. ಬಿ ನಲ್ಲಿಯೇ ಕೆಲಸ ಮಾಡ್ತಾ ಇದ್ದಿದ್ರಿಂದ, ನನಗೆ ಇಷ್ಟವಿಲ್ಲದಿದ್ದರೂ,  ಅವರು ಎಲೆಕ್ಟ್ರಿಕಲ್ ಅಂತ ನನಗೂ ಎಲೆಕ್ಟ್ರಿಕಲ್ ಕೊಡ್ಸಿದ್ರು. ಹಿರಿಯ ಸಹಪಾಠಿಗಳು ನನ್ನನ್ನು ಮಾನಸಿಕವಾಗಿ ನಪಾಸಾಗಲು ಸಿದ್ಧ ಮಾಡಿದ್ದರು!

ನಮಗೆ ಒಂದು 'solid state drives ' ಅನ್ನೋ ಒಂದು ವಿಷಯ ಇತ್ತು. ಅದು ಸಾಲಿಡ್ಡೋ, liquid ಓ. ನಮಗೆ ಮಾತ್ರ volatile ಆಗ್ತಾ ಇತ್ತು. ಪಾಪ ಆ ಉಪನ್ಯಾಸಕರು ನಮಗೆ ಅರ್ಥ ಆಗಲಿ ಅಂತ ತರಗತಿ ವೇಳೆ ಮುಗಿದ ಮೇಲೂ ಪಾಠ ಮಾಡಕ್ಕೆ, ನಮ್ಮ ತಲೆ ಒಳಗೆ ಒಂಚೂರು  ಏನು ಹೋಗ್ತಾ ಇರಲಿಲ್ಲ. ಎಲ್ಲ 'over head transmission ' ಆಗ್ತಾ ಇತ್ತು.

ಈ ವಿಷಯದ ಇಂಟರ್ನಲ್ಸ್ ಒಂದು ದಿನದ ಹಿಂದೆ ಘೋಷಣೆ ಮಾಡಿದ್ರು, ನಾಳೆ ಉಪ ಪರೀಕ್ಷೆ ಅಂತ! ಒಂದುವಾರ ಸಮಯ ಇದ್ದಿದ್ರೆ ಹೇಗೋ, ಹಾಗೂ ಹೀಗೂ  ಓದ್ಕೊಂಡ್ ಬರೀಬೋದಿತ್ತು. ಒಂದೇ ದಿನ ಸಮಯ ಇದ್ದಿದ್ದು.  ನನ್ನ ಗೆಳೆಯ ಗೆಳತಿಯರು ಯಾರೂ ಒತ್ತಡದಲ್ಲಿ ಇದ್ದ ಹಾಗೆ ಕಾಣಲಿಲ್ಲ. ಬದಲಾಗಿ, ಎಲ್ಲಾ ಹುರುಪಿನಿಂದ ಮೇಷ್ಟ್ರನ್ನ ಯಾವ ಕೊಠಡಿ ಯಲ್ಲಿ ಪರೀಕ್ಷೆ ಕೇಳ್ಕೊಂಡರು. ಹೇಗೆ ತಯಾರಾಗ್ತೀರಾ ಅಂದರೆ ಎಲ್ಲ ನಕಲು ಮಾಡೋದು ಅಂತ ತೀರ್ಮಾನ ಮಾಡಿದ್ರು. ನನಗೆ ತಲೆ ಬಿಸಿ ಶುರು ಆಯಿತು. ಅಲ್ಲಿವರೆಗೂ, ನಾನು ಜೀವನದಲ್ಲಿ ನಕಲು ಮಾಡಿರಲಿಲ್ಲ. ಈಗ ಏನಪ್ಪಾ ಗತಿ. ಹೇಗೆ ತಯಾರಿ ಮಾಡೋದು ಅಂತ ಯೋಚನೆ ಆಯಿತು. ನನ್ನ ಗೆಳೆತಿಯರು, 'ಇದೇನೇ ಅನಿತಾ, ಹುಡುಗರು ಆಡೋ ಎಲ್ಲ ಆಟ, ತರಲೆ ಮಾಡ್ತಿಯಾ, ಕಾಪಿ ಹೊಡೆಯಕ್ಕೆ ಹೆದರ್ತೀಯಲ್ಲೇ' ಅಂತ ಅಣಕಿಸಿದರು. ನಕಲು ಮಾಡದಿರುವುದು ನನ್ನ ಆದರ್ಶಗಳಲ್ಲಿ ಒಂದಾಗಿತ್ತು. ಆ ಆದರ್ಶನ ಬಿಡೋದು ಕಷ್ಟ ಆಗ್ತಿತ್ತು.

 ಸರಿ,ಈ ಸಲ ನಕಲು ಮಾಡೇ ಬಿಡೋಣ ಅಂತ ತೀರ್ಮಾನಿಸಿದೆ. ನನ್ನ ಗೆಳೆಯ ಗೆಳತಿಯರ ಹತ್ತಿರ ಹೇಗೆ ನಕಲು ಮಾಡೋದು ಅಂತ ಹೇಳಿಕೊಡಿ ಅಂದೆ. ಎಲ್ಲ ಸಂಜೆ ೫ ರ ನಂತರ ನಾಳೆ ಪರೀಕ್ಷೆ ಇರೋ ಕೊಠಡಿಗೆ ಬಾ ಅಂದ್ರು. ಅಲ್ಲಿ ಹೋದರೆ ಸುಮಾರು ಇಡೀ ಕ್ಲಾಸ್ ಅವರು ಹಾಜರಿದ್ದರು. ಅದೊಂದು ಡ್ರಾಯಿಂಗ್ ಹಾಲ್. ಎಲ್ಲ ತಾವೆಲ್ಲಿ ನಾಳೆ ಕೂರೋದು ಅಂತ ಮೇಜನ್ನು ಕಾದಿರಿಸಿದ್ರು (reserve ). ತಮ್ಮ ತಮ್ಮ ಮೇಜಿನ ಮೇಲೆ, ಮೇಜಿನ ಡ್ರಾ ಒಳಗೆ, ಕೆಳಗೆ ನೆಲದ ಮೇಲೆ ಸಣ್ಣ ಸಣ್ಣ diagram ಗಳು, code words ಗಳೆಲ್ಲ ಬರೆದರು. ನಂಗೂ ಬರೆಯಕ್ಕೆ ಹೇಳಿದ್ರು. ನಾನು ಹಾಗೆ ಬರೆದೆ.

ಮನೆಗೆ ಹೋಗಿ, ಸ್ವಲ್ಪ ಓದಿ, ಹಾಯಾಗಿ ನಿದ್ದೆ ಮಾಡಿದೆ, ನಕಲು ತಾನೇ ಮಾಡೋದು, ಇನ್ನೇನು ಚಿಂತೆ ಇಲ್ಲ ಅಂತ.

ಮಾರನೇ ದಿನ ತರಗತಿಗೆ ಹೋದಮೇಲೆ ಶುರುವಾಯಿತು ನೋಡಿ ಚಿಂತೆ. ಆ ಒಂದು ಗಂಟೆ ನನ್ನ ಜೀವನದ ಅತಿ ದೀರ್ಘ ಒಂದು ಗಂಟೆ.

ನನ್ನ ಗ್ರಹಾಚಾರಕ್ಕೆ, ನಾನು ನನ್ನ ಮೇಜಿನ ಮೇಲೆ ಬರೆದ ಯಾವುದೇ diagram ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳಿಗೆ ಸಹಾಯವಾಗಲಿಲ್ಲ. ಕೆಳಗಡೆ ನೆಲದ ಮೇಲೆ ಬರೆದವು ಎಷ್ಟು ಸಣ್ಣಕ್ಕೆ ಇದ್ದವೆಂದರೆ, ಮೇಲಿಂದ ನಂಗೆ ಕಾಣದು, ಕೆಳಗೆ ಬಗ್ಗಿ ನೋಡುವ ಕಲೆ ನನಗೆ ಬರದು.

ಅಕ್ಕಪಕ್ಕದವ್ರು ಹೇಗೆ ನಕಲು ಮಾಡ್ತಿದ್ದಾರೆ ನೋಡಿ ಮಾಡೋಣ ಎಂದು ಕಣ್ಣು ಹಾಯಿಸಿದೆ. ಕೆಲವು ಗೆಳತಿಯರು, ಅಂಗೈ ಮೇಲೆ ಬರೆದುಕೊಂಡು ಬಂದಿದ್ದರೆ, ಒಬ್ಬ ಮಹಾನುಭಾವಳು, ಮೆಹಂದಿಯಲ್ಲಿ ಸರ್ಕ್ಯೂಟ್ diagram ಹಾಕೊಂಡು ಬಂದು ಬಿಟ್ಟಿದ್ಲು. ಹುಡುಗರು, ಶೆಕೆಯಲ್ಲೂ ಜಾಕೆಟ್ ಧರಿಸಿ, ತೋಳನ್ನು ಮಡಿಸಿ, ಅದರ ತುಂಬಾ ಚೀಟಿ ತುಂಬಿಸಿಕೊಂಡು ಬಂದಿದ್ದರು. ಇನ್ನು ಕೆಲವರು, ಎಲ್ಲ ಎಷ್ಟು ತ್ವರಿತವಾಗಿದ್ದರು ಅಂದ್ರೆ, ಮೇಷ್ಟ್ರು ಅಲ್ಲಿ ನೋಡಿ , ಇಲ್ಲಿ ತಿರುಗೋ ಅಷ್ಟರಲ್ಲಿ ನಕಲು ಮಾಡೋರು. ನನಗೋ. ಆ ನೆಲ ನೋಡಿ diagram  ಹುಡುಕೋ ಅಷ್ಟರಲ್ಲಿ ಎರಡು ಸಲ ತಲೆ ಎತ್ತಿ ಮೇಷ್ಟ್ರು ನೋಡಿಬಿಟ್ಟರಾ ಅಂತ ಆತಂಕದಿಂದ ನೋಡೋದು. ಭಯದಲ್ಲಿ, ನೋಡಿದ diagram ಬರೆಯೋ ಅಷ್ಟರಲ್ಲಿ ಮರೆತೇ ಹೋಗಿರೋದು. ಅಂತೂ ಇಂತೂ ಕಷ್ಟ ಪಟ್ಟು ಒಂದು diagram ಬರೆದು ಅದಕ್ಕೊಂದಷ್ಟು theory ಹುಟ್ಟಿಸಿ ಬರೆಯೋ ಅಷ್ಟರಲ್ಲಿ ಘಂಟೆ ಬಾರಿಸಿ ಆಗಿತ್ತು.
ಬ್ಲೂ ಬುಕ್ ಬಂದ  ಮೇಲೆ ಗೊತ್ತಾಯಿತು, ನಾನು ಗಾಬರಿಯಲ್ಲಿ, ಎರಡು diagram ಗಳ ಅರ್ಧ ಭಾಗಗಳನ್ನು ಸೇರಿಸಿ  ನನ್ನದೇ ಹೊಸ ಅನ್ವೇಷಣೆಯ diagram ಸೃಷ್ಟಿಸಿದ್ದ ಕಾರಣ, ೧ ಅಂಕ ಬಂದಿತ್ತು!! ಅವತ್ತೇ ಮೊದಲು, ಅವತ್ತೇ ಕೊನೆ. ಮತ್ತೆ ನಕಲು ಮಾಡೋ ರಗಳೆಗೆ ಹೋಗಿಲ್ಲ ನಾನು.
ನಾನು ಹಿಂದಿನ ಆ ಕಾಪಿ ಮಾಡಕ್ಕೆ ಮಾಡೋ ತಯಾರಿಗೆ ಬದಲು ಓದಿದ್ದಿದರೆ, ಒಂದು ಪ್ರಶ್ನೆಗಾದರು ಉತ್ತರ ಬರೆಯಬಹುದಿತ್ತು.

ಈ ಘಟನೆಯ ನಂತರ, ನನ್ನ ಸುಪ್ತ ಮನಸ್ಸು ನನ್ನನ್ನು ಯಾವಾಗಲೂ ನನ್ನ ದೌರ್ಬಲ್ಯಗಳನ್ನು ಜಯಿಸಲು ಪ್ರಯತ್ನಿಸುವುದಕ್ಕಿಂತ ನನ್ನ ಸಾಮರ್ಥ್ಯವನ್ನು ವೃದ್ಧಿಸುವುದಕ್ಕೆ ಹೆಚ್ಚು ಒತ್ತು  ಕೊಡುತ್ತಿತ್ತು ಅನಿಸುತ್ತೆ. ನನ್ನ ಆಫೀಸಿನ ಕೆಲಸದಲ್ಲೂ ನಾನು ಇದೆ ಮಂತ್ರವನ್ನು ಉಪಯೋಗಿಸುತ್ತಿರುವೆ.

ಈ ಇಂಟರ್ನಲ್ಸ್ ಅನ್ನು 'ಬ್ಲೂ ಬುಕ್' ಅನ್ನೋ ಪುಸ್ತಕದಲ್ಲಿ ಬರೀತಾ ಇದ್ವಿ. ಮೇಲಿನ ಕವರ್ ಮಾತ್ರ ತಿಳಿ ನೀಲಿ ಬಣ್ಣದ್ದಾಗಿರ್ತ ಇತ್ತು. ಇಂಟರ್ನಲ್ಸ್ ಮುಗಿದ ಒಂದು ವಾರದ ಮೇಲೆ, ಯಾವಾಗ ಅಂಕಗಳನ್ನು ಹೇಳ್ತಾರೋ ಕಾಯ್ತಾ ಇರ್ತಿದ್ವಿ.

ಹಾಗೆ ಒಂದು ವಿಷಯದ ಇಂಟರ್ನಲ್ಸ್ ಮುಗಿದು ಒಂದು ವಾರ ಆಗಿತ್ತು. ನಮ್ಮ ಮೇಷ್ಟ್ರು ತರಗತಿಗೆ 'ಬ್ಲೂ ಬುಕ್ಸ್ ' ತೊಗೊಂಡು  ಬಂದರು. ನಮಗೆಲ್ಲ ಕಾತರ. ಎಷ್ಟು ಬಂದಿದೆಯೋ ಅಂತ. ಈ ಮಾಸ್ತರು ಸ್ವಲ್ಪ ಉದಾರ ಮನೋಭಾವದವರಿದ್ದರು. ಒಂದು, ಇಂಟರ್ನಲ್ಸ್ ಗೆ ಮುಂಚೆನೇ ೧೦-೧೫ ಪ್ರಶ್ನೆಗಳನ್ನು ಕೊಡ್ತಾ ಇದ್ರು. ಅದರಲ್ಲಿ ೫ ಪ್ರಶ್ನೆಗಳು ಬರುತ್ತೆ. ತಯಾರಾಗಿ ಬನ್ನಿ ಅಂತ. ಎರಡನೆಯದು, ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಅಂಕಗಳನ್ನು  ಕಡಿತ ಮಾಡ್ತಾ ಇರಲಿಲ್ಲ. ಹಾಗಾಗಿ ಇವರ ವಿಷಯದಲ್ಲಿ ಯಾರು ನಪಾಸಾಗ್ತಾ ಇರಲಿಲ್ಲ.

ಎಲ್ಲರಿಗೂ ಬ್ಲೂ ಬುಕ್ ವಿತರಣೆ ಆಯಿತು. ಎಲ್ಲರಿಗೂ ೨೫ ಅಂಕಗಳಿಗೆ ಸುಮಾರು ೨೦ರ ಮೇಲೆ ಬಂದಿತ್ತು . ಎಲ್ಲ ಖುಶಿಯಾಗಿದ್ವಿ. "ಎಲ್ಲರಿಗೂ ಬ್ಲೂ ಬುಕ್ ಸಿಕ್ತ?" ಅಂತ ಮೇಷ್ಟ್ರು ಕೇಳಿದ್ರು. ಎಲ್ಲ ಒಕ್ಕೊರಲಿನಿಂದ "ಯಸ್ ಸರ್" ಅನ್ನಕ್ಕೂ ನನ್ನ ಒಬ್ಬ ಸಹಪಾಠಿ ಎದ್ದು ನಿಂತ. "ನನ್  ಬ್ಲೂ ಬುಕ್ ಸಿಕ್ಕಿಲ್ಲ ಸರ್" ಅಂದ.
ಅವರು ಮೇಜಿನ ಆ ಕಡೆ ಈ ಕಡೆ ನೋಡಿ, ತಮ್ಮ ಚೀಲದಿಂದ ಒಂದು ಪುಸ್ತಕ ತೆಗೆದು, "ಒಹ್ ಇದು ಇಲ್ಲೇ  ಉಳಿದುಬಿಟ್ಟಿದೆ, ತೊಗೊ" ಅಂದ್ರು.
ಅವನು ಪುಸ್ತಕ ಇಸ್ಕೊಂಡ ಮೇಲೆ, ಮೇಷ್ತ್ರು, "ಎಷ್ಟು ಬಂದಿದ್ಯಪ್ಪ?" ಕೇಳಿದ್ರು. ಇವನು, "೨೪ ಸರ್".
ಅದಕ್ಕೆ ಮೇಷ್ಟ್ರು, "ಶಹಬಾಷ್, ಚೆನ್ನಾಗಿ ತೆಗೆದಿದ್ಯಾ ಅಂಕಗಳನ್ನ" ಅಂದ್ರು.  ಅವನು ಸ್ವಲ್ಪ ಹಾಗೆ ಹೆಮ್ಮೆ ಇಂದ ಬೀಗ್ತಾ ಇದ್ದ. ಮೇಷ್ಟ್ರು, "ನೋಡಪ್ಪ, ಕಾಪಿ ಚೀಟಿ ಬ್ಲೂ ಬುಕ್ ಅಲ್ಲೇ ಬಿಟ್ಟುಬಿಟ್ಟಿದ್ಯ. ತೊಗೊ. ಮುಂದಿನ ಸಲದಿಂದ ಕಾಪಿ ಚೀಟಿ ಮರೀದೆ ಬ್ಲೂ ಬುಕ್ ಇಂದ ತೆಗೆದು ಬಿಡು" ಅಂದ್ರು ನೋಡಿ, ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದು. ಅವನು ಮಾತ್ರ ಬೆಪ್ಪನ ತರ ಪೆದ್ದು ಪೆದ್ದಾಗಿ ನಗ್ತಾ ನಿಂತಿದ್ದ. ಉದಾರತೆಗೆ ಇದಕ್ಕಿಂತ ಉದಾಹರಣೆ ಬೇಕಾ? 

Friday, December 14, 2018

ಕಾಲೇಜಲ್ಲಿ ragging

 ಕೆಲವು ನೆನಪುಗಳು ಸುಂದರ ಹಾಗು ಸುಮಧುರ. ಈ ಮಧುರ ನೆನಪುಗಳ ಒಂದು ಗೆರೆ ತಲೆಯಲ್ಲಿ ಮೂಡುತ್ತಿದ್ದಂತೆ ಮುಖದಲ್ಲಿ ಮಂದಹಾಸ ಸುಳಿಯುತ್ತೆ. ನನಗೆ ಈ ತರದ ಸುಮಧುರ ನೆನಪುಗಳಲ್ಲಿ, ಕಾಲೇಜಿನ  ನೆನಪುಗಳೇ ಹೆಚ್ಚು.

ನಾನು ಸಣ್ಣ ಊರುಗಳಲ್ಲಿ ಬೆಳೆದವಳು. ಆಗಿನ ಕಾಲದಲ್ಲಿ ತಂತ್ರಜ್ಞಾನ ಹಾಗು ಮಾಧ್ಯಮಗಳ ಗಲಾಟೆ ಅಷ್ಟಿರಲಿಲ್ಲ. ಹೀಗಾಗಿ, ಶಾಲೆ ಮತ್ತು ಶಾಲೆಯ ಗ್ರಂಥಾಲಯ, ದಿನಪತ್ರಿಕೆಗಳಷ್ಟೇ ನಮ್ಮ ಮಾಹಿತಿಯ  ಬಂಢಾರ ಆಗಿದ್ದವು. ವಯಸ್ಸಿಗೆ ತಕ್ಕ ಜ್ಞಾನ ಇದ್ದದ್ದು ಅಷ್ಟಕ್ಕಷ್ಟೇ. ಸುಮಾರು ವರ್ಷ  ಓದಿದ್ದು ಕನ್ನಡ ಮಾಧ್ಯಮ. ಇಂಜಿನೀರಿಂಗ್ ಗೆ ಬಂದರೂ, ಇಂಗ್ಲಿಷ್ನಲ್ಲಿ ಮಾತನಾಡುವ ವಿಶ್ವಾಸ ಮೂಡಿರಲಿಲ್ಲ. ಈ ತರದ ಇನ್ನು ಹಲವಾರು ಮಿತಿಗಳಿದ್ದರೂ, ಸಂತೋಷಕ್ಕೆ ಮತ್ತು ಧೈರ್ಯಕ್ಕೆ ಮಿತಿಯಿರಲಿಲ್ಲ. ಪ್ರತಿದಿನ ನವನವೀನವಾಗಿರ್ತಾ ಇತ್ತು.

ಇಲ್ಲಿ, ನನ್ನ ಕಾಲೇಜು ದಿನಗಳ ಕೆಲವು ಅನುಭವಗಳನ್ನ ನಿಮ್ಮೊಡನೆ ಹಂಚಿಕೊಳ್ಳಲು ಬಯಸುವೆ. ನಿಮಗೂ ಇಂತಹುದೇ ಅನುಭವಗಳಾಗಿದ್ದಿರಬಹುದು. ಓದಿ, ನಿಮ್ಮ ಅನಿಸಿಕೆ ತಿಳಿಸಿ.

ನಾನು ಇಂಜಿನಿಯರಿಂಗ್ ಮಾಡಿದ್ದು ಹಾಸನದ ಮಲೆನಾಡು ಕಾಲೇಜಿನಲ್ಲಿ. ನಮ್ಮಪ್ಪನಿಗೆ, ನನ್ನ ಸೇರಿಸಬೇಕಾದ ಕಾಲೇಜಿನ ಪೂರ್ವಾಪೇಕ್ಷಿತ (prerequisite) ಏನಪ್ಪಾ ಅಂದ್ರೆ, ಕಾಲೇಜಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಇರಬೇಕು ಅಂತ!! ಮಲೆನಾಡು ಕಾಲೇಜು ಈ ಪರೀಕ್ಷೇಲಿ  ಪಾಸಾಗಿ, ನನ್ನ ಅಡ್ಮಿಶನ್ ಆಯಿತು.

ಊರು ಹೊಸದು, ಜನ ಹೊಸಬರು. ಒಂದುಕಡೆ ಉತ್ಸಾಹ ಇನ್ನೊಂದೆಡೆ ಹೆದರಿಕೆ. ಸೇರಿ ಒಂದು ವಾರಕ್ಕೆ ಕೆಲವರು ಸ್ನೇಹಿರತಾದರು. ಹೊಸ ಊರಲ್ಲಿ, ನಮಗೆ ನಮ್ಮವರು ತಮ್ಮವರು ಇಲ್ಲದ ಕಡೆ, ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ವಲ್ಪ ಸುಲಭ. ಬೇರೆ ಆಯ್ಕೆ ಇರಲ್ಲವಲ್ಲ!

ನನ್ನ ಹೊಸ ಗೆಳೆಯ ಗೆಳತಿಯರೆಲ್ಲ ಭಯದಿಂದ "ragging" ಬಗ್ಗೆ ಮಾತಾಡುತ್ತಿದ್ದರು. ಹಿರಿಯ ಸಹಪಾಠಿಗಳು, ಹೊಸದಾಗಿ ಸೇರಿದ ಕಿರಿಯರಿಗೆ 'rag' ಮಾಡ್ತಾರಂತೆ. ಅವರು ಹೇಳಿದ ಹಾಗೆ ಕೇಳಬೇಕಂತೆ. ಇಲ್ಲ ಅಂದ್ರೆ ಶಿಕ್ಷೆ ಇರುತ್ತಂತೆ. ಅದರಲ್ಲೂ, ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಇರುವವರಿಗೆ ಭಯಂಕರವಾಗಿ 'rag' ಮಾಡ್ತಾರಂತೆ. ನಾನೋ, 'rag' ಅನ್ನೋ ಪದ ಕೇಳಿದ್ದೆ ಮೊದಲ ಸಲ. ನಾನು ಕುತೂಹಲದಿಂದ, 'ragging' ಅಂದ್ರೆ ಏನು ಮಾಡ್ತಾರೆ? ಯಾಕೆ ನೀವೆಲ್ಲ ಇಷ್ಟು ಹೆದರಿದೀರಾ ಅಂತ ವಿಚಾರಿಸಿದೆ. ಒಬ್ಬೊಬ್ಬರು ಒಂದೊಂದು ಹೇಳಿದರು. ಹಿರಿಯ ಸಹಪಾಠಿಗಳನ್ನು, 'sir', 'maam' ಅಂತ ಕರೆಯಬೇಕಂತೆ. ಅವರು ಸಿಕ್ಕ ತಕ್ಷಣ ಸಲ್ಯೂಟ್ ಹೊಡೆದು 'ಗುಡ್ ಮಾರ್ನಿಂಗ್ ' / 'ಗುಡ್ ಇವಿನಿಂಗ್' ಹೇಳಬೇಕಂತೆ ಅಂತ ಕೆಲವರು ಹೇಳಿದರು. ನಾನು, ಇದಕ್ಕೆ ಯಾಕೆ ಹೆದರಬೇಕು, ಸ್ವಲ್ಪ ದಿನ ಹೇಳಿದನ್ನು ಮಾಡಿ ಸ್ವಲ್ಪ ಮಜಾ ತೊಗೊಂಡರೆ ಆಯಿತು ಅನ್ಕೊಂಡೆ. ಇನ್ನು ಕೆಲವರು, ಹಿರಿಯರ ಕೊಠಡಿ ಸ್ವಚ್ಛ ಮಾಡಿ ಕೊಡಬೇಕಂತೆ, ಅಶ್ಲೀಲ ಪ್ರಶ್ನೆಗಳನ್ನ ಕೇಳ್ತಾರಂತೆ ಅಂತ ಹೇಳಿದ್ರು. ನಾನು ಇದೆಲ್ಲ ಕೇಳಿದ್ರೆ ಆಗಲ್ಲ, ಹೀಗೆ ಮುಂದುವರೆದರೆ ಉಪನ್ಯಾಸಕರಿಗೆ ನಿಮ್ಮ ಮೇಲೆ ದೂರು ಕೊಡಬೇಕಾಗತ್ತೆ ಅಂತ ಹೆದರಿಸೋಣ ಅಂತ ಮನಸ್ಸಲ್ಲೇ ನಿರ್ಧಾರ ಮಾಡಿದೆ. ಮಾಡಿ, ನನ್ನ ಸರದಿಗಾಗಿ ಕುತೂಹಲದಿಂದ ಕಾದೆ.

"ragging" ಇನ್ನೊಂದು ಪ್ರಮಾಣಿತ ಪ್ರೋಟೋಕಾಲ್ ಅಂದ್ರೆ, ಹಿರಿಯ ಸಹಪಾಠಿ ಹುಡುಗರು, ಕಿರಿಯ ಸಹಪಾಠಿ  ಹುಡುಗರಿಗೆ,ತಮಗೆ ಇಷ್ಟ ಆದ ಕಿರಿಯ ಸಹಪಾಠಿ ಹುಡುಗಿಯರ ಹೆಸರು, ವಿಳಾಸ, ಹುಟ್ಟಿದ ವರ್ಷ, ದಿನ ಹೀಗೆ ಇನ್ನು ಕೆಲವು ವಿವರಗಳನ್ನು ಕೇಳಿ ತರುವುದಕ್ಕೆ ಹೇಳುವುದು.

ಅಂತೂ ಇಂತೂ ನನ್ನ ಸರದಿ ಬೇಗನೆ ಬಂತು.

ಒಂದು ದಿನ ನನ್ನ ಸಹಪಾಠಿಯೊಬ್ಬ ಬಂದು "ನಿನ್ನಿಂದ ಒಂದು ಸಹಾಯ ಆಗಬೇಕು. ನನಗೆ ವಿದ್ಯಾರ್ಥಿ ನಿಲಯದಲ್ಲಿ, 'ragging' ಮಾಡ್ತಾ ಇದಾರೆ. ನಿನ್ನ ಕೆಲವು ವಿವರಗಳನ್ನು ತರಕ್ಕೆ ಹೇಳಿದರೆ. ದಯವಿಟ್ಟು ಈ ಎಲ್ಲ ವಿವರಗಳನ್ನು ಕೊಡು ಅಂತ" ಒಂದು ಲಿಸ್ಟ್ ಕೊಟ್ಟ. ನಾನು, ಇದ್ಯಾರಪ್ಪಾ, ನನ್ನ ವಿವರಗಳನ್ನು ಕೇಳೋವರು ಅಂತ ಕುತೂಹಲವಾಗಿ, "ಯಾರು ಈ ವಿವರಗಳನ್ನು ಕೇಳಿದ್ದು" ಅಂತ ಕೇಳಿದೆ. ಅದಕ್ಕೆ ಅವನು, " ಹೆಸರು ಹೇಳೋ ಹಾಗಿಲ್ಲವಂತೆ". ಅದಕ್ಕೆ ನಾನು, "ಹೆಸರು ಹೇಳದಿದ್ದರೆ, ವಿವರಗಳು ಸಿಗಲ್ಲ" ಅಂದೆ. ಕೊನೆಗೆ ಅವನು ಸೋತು ಹೆಸರನ್ನು ಹೇಳಿದ.

ಈ ಮಲೆನಾಡು ಕಾಲೇಜಲ್ಲಿ ನನ್ನ ಪ್ರೌಢ ಶಾಲೆಯಲ್ಲಿ ಓದಿದ ಒಬ್ಬ ಹಿರಿಯ ಸಹಪಾಠಿ ಇದ್ದ. ನಮ್ಮಿರದ್ದು ಸ್ವಲ್ಪ ಚರಿತ್ರೆ ಇತ್ತು. ಅವನು ನನಗೆ ಪ್ರೊಪೋಸ್ ಮಾಡಿ ನಾನು ಇಲ್ಲ ಅಂದು ಪ್ರೌಢ ಶಾಲೆಯಲ್ಲಿ ಮಾತು ಬಿಟ್ಟಿದ್ದೆವು. ಈ ಕಾಲೇಜಿನಲ್ಲಿ, ಅವನು ನಂಗೆ ಕಾಟ ಕೊಡಕ್ಕೆ ನಿರ್ಧರಿಸಿದ ಹಾಗಿತ್ತು. ಹಾಗಾಗಿ, ನನ್ನ ಹಳೆ ಹಿರಿಯ ಸಹಪಾಠಿ, ನನ್ನ ತರಗತಿಯಲ್ಲಿದ್ದ ಒಬ್ಬನಿಗೆ ನನ್ನ ಕೆಲವು ವಿವರಗಳನ್ನು(ಹೆಸರು, ಹುಟ್ಟಿದ ವರ್ಷ, ದಿನಾಂಕ, SSLC  ಮಾರ್ಕ್ಸ್ಇತ್ಯಾದಿ) ತರೋದಕ್ಕೆ ಹೇಳಿದ್ದಾನೆ. 

ನಾನು ನನ್ನ ಸಹಪಾಠಿಗೆ " ಈ ಲಿಸ್ಟ್ ಅಲ್ಲಿ ಇರೋ ಎಲ್ಲ ವಿವರಗಳು ಅವನಿಗೆ  ತಿಳಿದಿವೆ. ಹಾಗಾಗಿ ಮತ್ತೆ ಹೇಳೋ ಅವಶ್ಯಕತೆ ಇಲ್ಲ. ನಾ ಹೀಗೆ ಹೇಳಿದೆ ಅಂತ ಹೋಗಿ ಹೇಳು ಅಂದೆ"

ಮಾರನೆ ದಿನ ಮತ್ತೆ ಬಂದ. "ಈ ವಿವರಗಳನ್ನೆಲ್ಲ ಬರೆದು ಕೊಡಬೇಕಂತೆ, ಅಂತ ಚೀಟಿ ಕೊಟ್ಟ. ನೀವು ಇದಕ್ಕೆ ಉತ್ತರಿಸದಿದ್ರೆ ನಂಗೆ ಅವರು ಹಿಂಸೆ ಮಾಡ್ತಾರೆ" ಅಂದ.
ನಾನು "ಅವನಿಗೆ ಹೇಳು, ನಾನು ಹೆಸರು ಬದಲಿಸಿಲ್ಲ. ನನ್ನ ಹುಟ್ಟಿದ ದಿನಾಂಕ , SSLC ಮಾರ್ಕ್ಸ್ ಎಷ್ಟು ವರ್ಷ ಆದರು ಬದಲಾಗಲ್ಲ. ಇದಕ್ಕೂ ಮಿಗಿಲಾಗಿ ಇನ್ನೂ ಏನಾದ್ರು ಬೇರೆ ವಿವರ ಬೇಕಿದ್ರೆ, ನನ್ನ ನೇರವಾಗಿ ಕೇಳಬೇಕಂತೆ"

ನನ್ನ ಹಿರಿಯ ಸಹಪಾಠಿಗಳಿಗೆ ಯಾಕೋ ಸಾಕಾಗಿ, ಅಲ್ಲಿಗೆ ಈ ಘಟನೆಗೆ ಮುಕ್ತಾಯ ಹಾಡಿದರು.

ಈ ಘಟನೆ ನನಗೆ ನನ್ನ ಮೇಲೆ ಜಾಸ್ತಿ ವಿಶ್ವಾಸ ಮೂಡಿಸಿತು. 'ragging ' ಮಾಡಿಸ್ಕೊಳೋರು ಸಹ ಮಜಾ ತೊಗೋಬಹುದು ಅನ್ನಿಸಿತು.

ಒಂದು ದಿನ ತರಗತಿ ಮುಗಿಸಿ ನಾನು ನನ್ನ ಗೆಳತೀ ಸೈಕಲ್ ಸ್ಟಾಂಡ್ ಇಂದ ಸೈಕಲ್ ತಳ್ಳಿಕೊಂಡು ಮುಖ್ಯ ಗೇಟ್ ಕಡೆ ಬರ್ತಾ ಇದ್ವಿ. ಮೂರು ನಾಕು ಜನ ಹುಡುಗರು ನಮ್ಮ ಕಡೆ ಬಂದರು. ನನ್ನ ಗೆಳತೀ 'ಅನಿ, ಇವರು ನಮ್ಮನ್ನ 'rag' ಮಾಡಕ್ಕೆ ಬರ್ತಾ ಇದಾರೆ ಅನ್ನಿಸುತ್ತೆ' ಅಂತ ಅರ್ಧ ಅಳು ದನೀಲಿ ಹೇಳಿದಳು. ನಾನು, ಯಾಕೆ ಹೆದರ್ತೀಯ, ಕ್ಯಾಂಪಸ್ ಒಳಗೆ ಇದೀವಿ. ಏನ್ ಮಹಾ ಮಾಡಕ್ಕೆ ಆಗತ್ತೆ ಅವರಿಗೆ. ನೋಡೇ ಬಿಡೋಣ ಬಿಡು   ಅಂದೆ.

ಹುಡುಗರು ಬಂದರು. ನಮ್ಮಿಬ್ಬರ ಹೆಸರು, ಬ್ರಾಂಚ್ ಮತ್ತು ಊರು ಕೇಳಿದರು. ಹೇಳಿದ ನಂತರ ನನ್ನ ಗೆಳತಿಗೆ A B C D ಹೇಳು ಅಂದರು. ಅಷ್ಟಕ್ಕೇ ಅವಳು ಆಳಕ್ಕೆ ಶುರು ಮಾಡಿದಳು. ನಾನು ಬೇಗ ಹೇಳು ಮಾರಾಯಿತಿ, ಇದಕ್ಕೆ ಯಾಕೆ ಅಳ್ತಿ ಅಂದೆ. ಅಳ್ತಾನೆ A B C D ಮುಗ್ಸಿದ್ಲು.

ಮುಂದೆ ನನ್ನ ಸರದಿ. ನಾನು ತಯಾರಾಗಿದ್ದೆ.
ನನಗೆ A B C D ಹೇಳು ಅಂದ್ರು. ಕೆಲವೊಂದು ಸಲ ನನ್ನ ತಲೆ ಹಠಾತ್ ಆಗಿ ನನಗೆ ಗೊತ್ತಿಲ್ಲದ ಪ್ರತಿಕ್ರಿಯೆ ಕೊಟ್ಟಿಬಿಡತ್ತೆ. ಅವರು A B C D ಹೇಳು ಅಂದ ತಕ್ಷಣ, ನಾನು "'ಕ್ಯಾಪಿಟಲ್' ಓ , 'ಸ್ಮಾಲ್' ಓ? ಅಂದುಬಿಟ್ಟಿದ್ದೆ.  ನನ್ನ ಪ್ರಶ್ನೆಗೆ ನನಗೆ ನಗು. ನನ್ನ ಹಿರಿಯ ಸಹಪಾಠಿಗಳಿಗೆ ಆಶ್ಚರ್ಯ ಮತ್ತು ನಗು ಒಟ್ಟೊಟ್ಟಿಗೆ. "ಮೊದಲು 'ಕ್ಯಾಪಿಟಲ್' ಹೇಳು, ಆಮೇಲೆ 'ಸ್ಮಾಲ್'" ಅಂದ್ರು. ನಾನು ಉಚ್ಚ ಸ್ವರದಲ್ಲಿ 'ಕ್ಯಾಪಿಟಲ್' A B C D ಹೇಳಿ,   ಮೆಲುದನಿಯಲ್ಲಿ 'ಸ್ಮಾಲ್' A B C D ಹೇಳಿದೆ. ಅವರು ಸರಿ ಅಂತ ಹೊರಟರು. ನಾನು ಸುಮ್ಮನಿರಲಾಲಾರದೆ, "ಅ  ಆ ಇ ಈ " ಬೇಡವಾ?" ಅಂದೆ(ಅಲ್ಲೂ ಕನ್ನಡ ಪ್ರೇಮ!!). ಅವರು ಒಂದು ಸರ್ತಿ ನನ್ನ ಗುರಾಯಿಸಿದ್ರು. ನನ್ನ ಗೆಳತಿ, ನನ್ನ ಕೈ ಗಿಂಡತ ಇದ್ಲು, ಸುಮ್ನಿರೇ ಅಂತ. ಆಮೇಲೆ, ಅವರು, "  ಇವತ್ತಿಗೆ ಇಷ್ಟು ಸಾಕು" ಅಂದು ಹೊರಟರು.

ನನ್ನ ಗೆಳತಿ, ಅಳು ಮರೆತು ನಕ್ಕೋತ್ತಾ "ಅನಿ , ನೀ ಬರೀ ತರಲೆ ಕಣೇ ! " ಅಂತ ಸೈಕಲ್ ಏರಿ ಹೋದಳು.

ಕೆಲವೊಮ್ಮೆ ಗಂಭೀರ ಸನ್ನಿವೇಶಗಳಲ್ಲಿ ಹಾಸ್ಯ ಭಾವನೆಗಳನ್ನು ತಿಳಿ ಮಾಡಿ ನಮಗೆ ಬೇಕಾದ ಪ್ರತಿಕ್ರಿಯೆಯನ್ನು ಕೊಡಿಸುತ್ತೆ.


Friday, June 22, 2018

ಹೆಸರಲ್ಲೇನಿದೆ?

ಬೆಂಗಳೂರಿನ ಬ್ಯುಸಿ ಬದುಕಿನಲಿ, ಹಾಸ್ಯ ಯಾಕೋ ಸೊರಗಿದೆ ಅನ್ನಿಸುತ್ತೆ. ಬಾಯ್ತುಂಬ ಮಾತಾಡೋರು, ಹೊಟ್ಟೆ ಹುಣ್ಣಾಗೋ ಹಾಗೆ ನಗುವವರೇ ಕಮ್ಮಿ ಆಗೋಗಿದ್ದಾರೆ. ಬರೀ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿರೋರು, ಟ್ರಾಫಿಕ್ ಅಲ್ಲಿ ನಿಂತಿರೋರು, ಕಚೇರಿಗೆ ಓಡ್ತಿರೋರು, ಇವರುಗಳೇ ಜಾಸ್ತಿ ಕಾಣ್ತಾರೆ  ನಂಗೆ.

ಹೀಗಿರೋವಾಗ, ತುಂಬಾ ಒತ್ತಡ ಇರೋ ಐ ಟಿ ಬದುಕಲ್ಲಿ, ಕೆಲವೊಮ್ಮೆ ಸಿಕ್ಕಾಪಟ್ಟೆ ನಗು ಬರೋ ತರಹದ ಸಂದರ್ಭಗಳು  ಹುಟ್ಟುತ್ತವೆ, ಮರಳುಗಾಡಿನ ಓಯಸಿಸ್ ಥರ.

ನಾನು ಕೆಲಸಕ್ಕೆ ಸೇರಿದ ಹೊಸತು. ಆಂಗ್ಲ ಭಾಷೆಯನ್ನು ಇನ್ನೂ ಧೈರ್ಯವಾಗಿ ಮಾತಾಡುವ ಅಭ್ಯಾಸ ಆಗಿರಲಿಲ್ಲ. ನನ್ನನ್ನು ಯಾವುದೋ ಯೂರೋಪ್ ಗ್ರಾಹಕರ ಯೋಜನೆಗೆ (project) ಹಾಕಿದ್ದರು. ನನಗೆ ಮೊದಲೇ ಆಂಗ್ಲ ಭಾಷೆ ಉಪಯೋಗಿಸುವಾಗ, ಸರಿಯಾದ ಪದ ಬಳಕೆ ಮಾಡ್ತೀನ ಅನ್ನೋ ಅನುಮಾನ ಇತ್ತು ಆಗ.  ಹೀಗಿರೋವಾಗ, ದಿನಾ ಈ ಯೂರೋಪಿಯನ್ನರೊಡನೆ ಸ್ಕೈಪ್ ಅಲ್ಲಿ ಸಭೆ (ಮೀಟಿಂಗ್). ನನಗೋ, ಅವರ ಉಚ್ಚಾರಣೆ ಚೂರು ಅರ್ಥ ಆಗ್ತಾ ಇರಲಿಲ್ಲ. ಗುಡ್ ಮಾರ್ನಿಂಗ್ ಹೇಳಿ, ಅವರು ಕೇಳಿದ್ದಕ್ಕೆಲ್ಲ ಪೆಚ್ಚು ನಗೆ ನಕ್ಕು, ನನ್ನ ಸಹುದ್ಯೋಗಿಯ ಮುಖ ನೋಡ್ತಾ ಇದ್ದೆ. ಪಾಪ ಅವಳು, ಏನು ಹೇಳಿದ್ರು ಅಂತ ವಿವರಿಸೋಳು.

ಆ ಕಡೆ ತುಂಬಾ ಜನ ಸಭೆ ಸೇರಿದಾಗ, "ಹಾಯ್ ಆಲ್ , ಹಾಯ್ ಎವೆರಿಒನ್" ಅಂದುಬಿಡ್ತಾ ಇದ್ವಿ. ಒಬ್ಬೊಬ್ಬರೇ ಕರೆಗೆ ಬಂದಾಗ ಹೆಸರು ಕರೆಯಬೇಕಿತ್ತು. ತಂಡದ ಸಭೆ ಇದ್ದಾಗ ಗುಂಪಲ್ಲಿ ಗೋವಿಂದ ಅಂತ ಹೇಗೋ ನಡೀತಿತ್ತು.

ಒಮ್ಮೆ, ನಾನು ಒಬ್ಬಳೇ ಒಬ್ಬ ಯುರೋಪಿಯನ್ ಗ್ರಾಹಕನ ಜೊತೆ ಕರೆಗೆ ಹೋಗೋ ಸಂಧರ್ಭ ಬಂತು. ಅವನ ಹೆಸರು Ionut ಅಂತ. ಅಷ್ಟು ದಿನ ಅವನ ಹೆಸರನ್ನು ಹೇಗೆ ಉಚ್ಚರಿಸಬೇಕೆಂಬ ಯೋಚನೆಯನ್ನೇ ಮಾಡಿರಲಿಲ್ಲ ನಾನು. ಒಬ್ಬಳೇ ಕರೆಗೆ ಹೋಗಬೇಕಲ್ಲ ಅನ್ನೋ ಆತಂಕ ಒಂದೆಡೆ. ಇವನ ಹೆಸರನ್ನು ತಪ್ಪು ಉಚ್ಚರಿಸಿದರೆ ಕಷ್ಟ ಅನ್ನಿಸಿ, ನನ್ನ ಹಿರಿಯ ಸಹುದ್ಯೋಗಿ ಒಬ್ಬಳ ಹತ್ತಿರ ಹೋದೆ. ಸಂಕೋಚದಿಂದ, "ನೋಡಿ, ನನಗೆ ಒಬ್ಬ ಗ್ರಾಹಕನ ಜೊತೆ ಕರೆ ಇದೆ. ಅವರ ಹೆಸರು ಹೇಗೆ ಉಚ್ಚರಿಸಬೇಕು ತಿಳಿಯುತ್ತಿಲ್ಲ".  ಅವಳು, ನಗುತ್ತಲೇ, "ಯಾರೊಡನೆ ಕರೆ ಇದೆ ನಿಮಗೆ" ಎಂದಳು.
ನಾನು "'ಯು ನಟ್' ಅಂತ" ಅಂದಿದ್ದೆ ತಡ ಅವಳು ಜೋರಾಗಿ ನಗತೊಡಗಿದಳು. ನನಗೆ ಅವಳು ಯಾಕೆ  ಹಾಗೆ ನಗ್ತಾ ಇದ್ದಾಳೆ ಎಂದು ಅರ್ಥ ಆಗ್ಲಿಲ್ಲ. ಕರೆಗೆ ತಡ ಬೇರೆ ಆಗ್ತಾ ಇತ್ತು.
ಆಕೆ ನಗುವುದ ನಿಲ್ಲಿಸಿ " ಅವನ ಹೆಸರು ಯೋನಟ್" ಎಂದಳು. ಕರೆ ಮುಗಿಸಿ ಬಂದು, ಗೂಗಲ್ ಮಾಡಿ ನೋಡಿದೆ.  "ಯು ನಟ್" ಅಂದ್ರೆ ಏನು ಅಂತ. ಅರ್ಥ ನೋಡಿ  ಭಯ, ನಗು ಎರಡೂ ಒಟ್ಟಿಗೆ ಆಯಿತು. "ನಿಂಗೆ ಐಲು" ಅನ್ನೋ ಥರ ಅರ್ಥ ಅದು. ಸದ್ಯ, ನನ್ನ ಸಹುದ್ಯೋಗಿಯನ್ನು ಕೇಳಿದ್ದು ಒಳ್ಳೆದಾಯಿತು ಅಂದುಕೊಂಡೆ. ಮುಂದೆ, ಆ ಗ್ರಾಹಕ ಇರೋ ಊರಿಗೆ ಹೋದಾಗ, ಅವನನ್ನು ಕೇಳಿದೆ, "ನಿನ್ನ ಹೆಸರನ್ನು ಹೇಗೆ ಉಚ್ಚರಿಸಬೇಕು?" ಅಂತ. ಅದಕ್ಕವನು, "ಯೂನು " ಅಂದ.

ನಮ್ಮ ಕಥೆ ಹೀಗೆ ಆದರೆ, ಈ ಗ್ರಾಹಕ ಕಥೆ ಇನ್ನೊಂದು ಥರ. ನಮ್ಮ ತಂಡದಲ್ಲಿ, ಒಬ್ಬಳು "ಶ್ರದ್ಧಾ" ಅಂತ ಇದ್ದಳು. ನಾವು ಎಷ್ಟು  ಸರಿಪಡಿಸಿ ಹೇಳಿಕೊಟ್ಟರೂ ನಮ್ಮ ಗ್ರಾಹಕರೆಲ್ಲರೂ, ಅವಳನ್ನು "ಶ್ರಾದ್ಧಾ" ಎಂದೇ ಕರೆಯುತ್ತಿದ್ದರು. ನಮಗೆಲ್ಲ ತುಂಬಾ ನಗು. ಅವಳಿಗೋ,  ಗ್ರಾಹಕರ ಮೇಲೆ ಮತ್ತು ಅವರ ತಂದೆ ತಾಯಿಯ ಮೇಲೆ ಸಿಟ್ಟು ಬರ್ತಿತ್ತು.

ಇನ್ನೊಬ್ಬ ಸಹುದ್ಯೋಗಿಯ ಹೆಸರು "ಶ್ರವಂತ್ ." ಈ  ಒತ್ತು ಅಕ್ಷರದ ಉಚ್ಛಾರ  ಅವರಿಗೆ ಬಲು ಕಷ್ಟ. ನಾವು ಪದೇ ಪದೇ ಹೇಳಿ ಕೊಟ್ಟೆವು. ಕೊನೆಗೆ ಒಬ್ಬನಂತೂ  ಮೂರು ನಾಲ್ಕು ಸಲ ಅಭ್ಯಾಸ ಮಾಡಿ ತನಗೆ ಉಚ್ಚರಿಸಲು ಅನುಕೂಲವಾದ  "ಸರ್ವೆಂಟ್" ಅಂತ ಹೇಳಿ, "this is easy " ಅಂದ. ನಮ್ಮ ಶ್ರವಂತನ ಮುಖ ಸಿಟ್ಟಿನಿಂದ ಕೆಂಪಗೆ ಆಗಿತ್ತು. ನಾನು ಮಧ್ಯ ಬಾಯಿ ಹಾಕಿ, "ಶ್ರವಂತನ ಕೊನೆಯ ಹೆಸರು ಸುಲಭ. ಇನ್ನು ಮೇಲೆ ಇವನನ್ನು "ರೆಡ್ಡಿ" ಎಂದು ಕರೆಯೋಣ ಎಂದೆ. ಎಲ್ಲರೂ ಕೊನೆಗೆ ಒಪ್ಪಿದರು.

ಹೀಗೆ ಒಂದು ಸಲ, ನಮ್ಮ ಡೈರೆಕ್ಟರ್ ಸಭೆ ಕರೆದರು. ಅಮೇರಿಕಾದಿಂದ "ಕ್ರಿಸ್ , ಶಾಂಕ್ಸ್  ಹಾಗು ಪ್ಯಾಡಿ " ಬರ್ತಾರೆ. ಅದಕ್ಕೆ ಕೆಲವೊಂದು   ವರದಿ ಪಟ್ಟಿ ತಯಾರಿಸಬೇಕು ಎಂದರು. ನಾನು, ಜೀವನದಲ್ಲಿ ಅದುವರೆಗೂ ಬೇರೆ ದೇಶದವರನ್ನು ನೋಡಿರಲಿಲ್ಲ. ನಾನು ತುಂಬಾ ಉತ್ಸುಕಳಾಗಿ, ಈ ತ್ರಿಮೂರ್ತಿಗಳ  ಬರವಿಗಾಗಿ ಕಾದೆ.
ನಮ್ಮನ್ನೆಲ್ಲ "All Hands Meet " ಅನ್ನೋ  ಸಭೆಗೆ ಕರೆದರು. ನಾನು ಹೋಗಿ ಮುಂದಿನ ಸಾಲಿನಲ್ಲೇ ಕುಳಿತೆ. ಒಂದಷ್ಟು ಜನ ಸೂಟು  ಬೂಟು ಹಾಕಿದ ಭಾರತೀಯರು ಬಂದರು. ನಾನು ಬೇರೆಯವರು ಬರುತ್ತಾರೆ ಎಂದು ಬಾಗಿಲ ಕಡೆ ನೋಡುತ್ತಿದಾಗಲೇ ಸಭೆ ಶುರುವಾಯಿತು. ಸೂಟುಧಾರಿಗಳು ತಮ್ಮನ್ನ "ಕ್ರಿಸ್, ಶಾಂಕ್ಸ್ ಮತ್ತು ಪ್ಯಾಡಿ" ಆಗಿ ಪರಿಚಯ ಮಾಡಿಕೊಂಡರು. ನನಗೆ ಅವರು ಏನು ಹೇಳುತ್ತಿದ್ದಾರೆ ಅಂತ ಕೇಳಿಸಿಕೊಳ್ಳುವ ಬದಲು, ಇವರು ಯಾಕೆ ಪರಕೀಯರ ತರ ಹೆಸರು ಇಟ್ಕೊಂಡಿದಾರೆ ಅನ್ನೋದೇ ತಲೇಲಿ ಓಡ್ತಾ ಇತ್ತು. ಯಾರನ್ನಾದ್ರೂ ಕೇಳಕ್ಕೆ ನಾಚಿಕೆ. ಅವರುಗಳು ವಾಪಸ್ಸು ಅಮೆರಿಕೆಗೆ ಹೊರಡುವ ಮುನ್ನ "ವಂದನೆಗಳ ಈಮೇಲ್" ಕಳಿಸಿದಾಗ ತಿಳೀತು, ಇವರು ಕೃಷ್ಣಮೂರ್ತಿ, ಶಂಕರ ನಾರಾಯಣ ಮತ್ತು ಪದ್ಮನಾಭ ಅಂತ. ಬಹುಷಃ, ಅವರಿಗೂ ನಮ್ಮ ಶ್ರವಂತನ ಗತಿ ಬಂತಿತ್ತೇನೋ, ಅದಕ್ಕೆ ಇವರುಗಳು, ತಮ್ಮ ಹೆಸರನ್ನು ಅಭಾಸ ಆಗದ ಹಾಗೆ ಬಾಲಾಯಿಸಿಕೊಂಡಿರಬೇಕು.

ಪರ ಭಾಷೆ ಸಂಸ್ಕೃತಿ ಜನಗಳು ಒಟ್ಟಿಗೆ ಇದ್ದಾಗ ಈ ತರಹದ ಆಭಾಸಗಳು ಸ್ವಾಭಾವಿಕ. ಆದರೆ ಒಂದೇ ಭಾಷೆ ಇದ್ದೂ ಹ್ರಸ್ವ ಮಹಾ ಪ್ರಾಣಗಳ ತಪ್ಪು ಬಳಕೆಗಳಿಂದ ಆಭಾಸಗಳು ಆಗಿವೆ.

ಕೆಲವರು  'ಆ' ಕಾರ ಮತ್ತು  'ಹ' ಕಾರದ ಉಚ್ಚಾರಣೆ  ತಪ್ಪಾಗಿ ಕಲ್ತಿರ್ತಾರೆ. ಆ ತರದವರೊಬ್ಬರು ನಮ್ಮ ತಂಡಕ್ಕೆ ಸೇರಿದರು. ನನ್ನನ್ನು "ಹನೀತಾ" ಎನ್ನುತ್ತಿದ್ದರು. ನಾನು ಎಷ್ಟು ಸರಿ ಮಾಡಿದರು, ಮತ್ತೆ ಹನೀತಾ ಅನ್ನುತ್ತಿದ್ದರು. ನಾನು ನಾಯಿ ಬಾಲ ಡೊಂಕು ಎಂದು ಸುಮ್ಮನಾಗಿದ್ದೆ. ನಮ್ಮ ತಂಡಕ್ಕೆ ಒಬ್ಬ "ಆಜಮ್" ಎಂಬ  ಹೆಸರಿನ ಹುಡುಗ ಸೇರಿದ. ಹೊಸ ಹುಡುಗನನ್ನು ಬಹು ಆದರದಿಂದ ನಮ್ಮ ಹ ಕಾರದ ಸಹುದ್ಯೋಗಿ, "ಹಜಾಮ್"  "ಹಜಾಮ್" ಅಂತ ಕರೆಯಕ್ಕೆ ಶುರು ಮಾಡಿದ. ನಮಗೆ ನಗು ಒಂದು ಕಡೆ. ಆ ಹುಡುಗನ ಪಾಡು ನೋಡಕ್ಕೆ ಆಗ್ತಾ ಇರ್ಲಿಲ್ಲ. ಕೊನೆಗೆ ಆ ಹುಡುಗ, ನಮ್ಮ ತಂಡ ಬಿಟ್ಟು ಬೇರೆ ತಂಡಕ್ಕೆ ಸೇರಿದ, ದಿನಾ ಹಜಾಮ ಅನ್ನಿಸ್ಕೊಳೋದನ್ನ ತಪ್ಪಿಸ್ಕೊಳಕ್ಕೆ.

ಒಂದು ಸಮಯದಲ್ಲಿ ನಾನು ಎರಡು ಯೋಜನೆಗಳನ್ನು ನಿಭಾಯಿಸ್ತಾ ಇದ್ದೆ. ಒಂದು ಗ್ರಾಹಕಿಯ ಹೆಸರು 'ಚೆಮು' ಹಾಗು ಇನ್ನೊಂದು ಗ್ರಾಹಕಿಯ ಹೆಸರು 'ಎಮಿಲಿ'. ಇಬ್ಬರ ಜೊತೆಯೂ ಒಬ್ಬರಾದ ಮೇಲೆ ಒಬ್ಬರ ಜೊತೆ ದಿನವೂ ಕರೆಯಲ್ಲಿ ಮಾತಾಡುತ್ತಿದ್ದೆ. ಮೊದಲು 'ಚೆಮು' ಜೊತೆ ಕರೆ ಇರ್ತಿತ್ತು. ನನಗೋ, ಎಲ್ಲರ ಹೆಸರನ್ನು ಪದೇ ಪದೇ ಕರೆಯೋ ಅಭ್ಯಾಸ. ಹಿಂದಿನ ಕರೆಯಲ್ಲಿ  "ಯಸ್ ಚೆಮು, ನೋ ಚೆಮು, ಒಕೆ  ಚೆಮು" ಅಂತ ಹೇಳಿಕೊಂಡು ಎಮಿಲಿಯ ಕರೆಗೆ ಬಂದೆ. ಏನೋ ಗಡಿಬಿಡಿಯಲ್ಲಿ, ಕರೆ ಶುರುವಾದ ತಕ್ಷಣ, "ಹಾಯ್ ಚಮೇಲಿ, ಗುಡ್ ಮಾರ್ನಿಂಗ್" ಅಂದು ಬಿಟ್ಟೆ.
ಈ ಕಡೆ ನನ್ನ ತಂಡದವರು ಕರೆಯನ್ನು ಮ್ಯೂಟ್ ಗೆ ಹಾಕಿ, ಬಿದ್ದು ಬಿದ್ದು ನಗ್ತಾ ಇದ್ದಾರೆ. ನನಗೂ ನಗು. ಸದ್ಯ, ಎಮಿಲಿಗೆ ನಮ್ಮ ಭಾರತೀಯ ಭಾಷೆಗಳು ಬರದೇ ಇದ್ದಿದ್ದರಿಂದ ನನ್ನ ಕೆಲಸು ಉಳೀತು ಅಷ್ಟೇ!
ಹಿಂದೆ ಮಕ್ಕಳಿಗೆ ನಾಮಕರಣ ಮಾಡೋವಾಗ, ಜಾತಕದ ಪ್ರಕಾರ ಬಂದ ಅಕ್ಷರದಿಂದಲೋ ಅಥವಾ ಮನೆಯಲ್ಲಿ ಹಿರಿಯರ ಹೆಸರೋ, ದೇವರ ಹೆಸರೋ ಇಡ್ತಾ ಇದ್ರು. ಈಗ, ಮುಂದೆ ಮಗು ದೊಡ್ಡದಾಗಿ ಯಾವ ದೇಶದಲ್ಲಿ/ದೇಶದವರಿಗೆ ಕೆಲಸ ಮಾಡುತ್ತೋ, ಅವರಿಗೆ ಕರೆಯಲು ಸುಲಭವಾಗುತ್ತೋ ಅನ್ನೋದು ಯೋಚನೆ ಮಾಡೋ ಪರಿಸ್ಥಿತಿ ಬಂದಿದೆ.

ಕಾಲಾಯ ತಸ್ಮೈ ನಮಃ !







Thursday, June 14, 2018

ಯಜಮಾನ ಯಾರು?

ಕೆಲವು ವರ್ಷಗಳ ಹಿಂದೆ, ಒಂದು ಸಂಸ್ಥೆ(ಕಂಪನಿ)ಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ. ಅಲ್ಲಿ, ನಮ್ಮದು ಒಂದು ದೊಡ್ಡ ತಂಡ. ಸುಮಾರು ಮುನ್ನೂರು ಜನದ ತಂಡ ಒಂದು ಗ್ರಾಹಕ (ಕ್ಲೈಂಟ್) ನಿಗೆ ಕೆಲಸ ಮಾಡ್ತಾ ಇದ್ವಿ. ತಂಡ ಅಂತ ಇದ್ದ ಮೇಲೆ ನಾಯಕ ಇರಲೇಬೇಕಲ್ಲವೇ! ನಮ್ಮ ಪೂರ್ತಿ ತಂಡದ ಉನ್ನತ ನಾಯಕತ್ವವನ್ನು ಒಬ್ಬರು ಕನ್ನಡದವರು ವಹಿಸಿದ್ದರು. ಅವರ ಪದನಾಮ (ಡೆಸಿಗ್ನೇಷನ್) ಅಕೌಂಟ್ ಡೈರೆಕ್ಟರ್ ಆಗಿತ್ತು. ಈ ಸ್ಥಾನ ತುಂಬಾ ಪ್ರಬಲ (ಪವರ್ಫುಲ್) ಹಾಗು ಪ್ರಭಾವಶಾಲಿ (influential) ಆಗಿತ್ತು. ಇವರ ತೀರ್ಮಾನವೇ ಅಂತ್ಯ.

ಮನುಷ್ಯ ಅಂದ ಮೇಲೆ ಅವರದೇ ಆದ ಬಲಾಬಲಗಳು (strengths & weakness) ಇರುತ್ತವೆ. ನಮ್ಮ ಡೈರೆಕ್ಟರ್ ಅವರು ನೇರ (straightforward ) ಹಾಗು ದಿಟ್ಟ (daring ). ತುಂಬಾ ಜನರಿಗೆ ಇದು ಇಷ್ಟ ಆಗ್ತಾ ಇರಲಿಲ್ಲ. ಮಾತಿನಲ್ಲಿ ತುಂಬಾ ಚಾಣಾಕ್ಷರಿದ್ದರು. ವಾದಗಳಲ್ಲಿ ಇವರನ್ನು ಗೆಲ್ಲುವುದಕ್ಕೆ  ಆಗುತ್ತಿರಲಿಲ್ಲ. ತಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನು ಸೋಲಿಸಿ ತಮಗೆ ಏನು ಸರಿ ಅನ್ನಿಸುತ್ತೋ ಅದನ್ನು, ಇಲ್ಲ ತಮಗೆ ಹೇಗೆ ಬೇಕೋ ಹಾಗೆ ಕೆಲಸವನ್ನು ಹಾಗು ತಂಡವನ್ನು ಮುನ್ನಡೆಸುತ್ತಿದ್ದರು. ತಮಗೆ ಇಷ್ಟ ಇಲ್ಲದವರ ತಪ್ಪುಗಳನ್ನು ಎತ್ತಿ, ಅವರ ಕೆಲಸಕ್ಕೆ ಅಡ್ಡಿ ಅಡಚಣೆಗಳನ್ನು ಮಾಡುವುದರಲ್ಲೂ ಇವರು ನಿಸ್ಸೀಮರಾಗಿದ್ದರು. ಹಾಗೆ, ತಮ್ಮ ಕೆಳಗಿದ್ದವರನ್ನು ಬೇರೆ ಪಾಲುದಾರರಿಂದ (stakeholders ) ಆಗುವ ಮಾತಿನ ದಾಳಿಗಳಿಂದ ರಕ್ಷಿಸುತ್ತಿದ್ದರು. ಕೆಲವರಿಗೆ ಇವರೆಂದರೆ ಭಯ. ಎಲ್ಲಿ ಯಾವಾಗ ತೊಂದರೆ ಒಡ್ಡುತ್ತಾರೋ ಎಂದು. ಕೆಲವರು, ಇವರಿಗೆ ಹೇಗೆ ಬೇಕೋ ಹಾಗೆ ನಡೆದುಕೊಂಡು, ತೊಂದರೆಗಳನ್ನು ಬರದಂತೆ ನಿಭಾಯಿಸುತ್ತಿದ್ದರು. ಒಟ್ಟಿನಲ್ಲಿ ಇವರ ಪ್ರಾಬಲ್ಯ ಹೆಚ್ಚಿತ್ತು. ಇವರಿಗೆ ಬೇಕಾದಂತೆ ಬೇರೆಯವರು ನಡೆಯಬೇಕಿತ್ತು.

ಸಾಂಧರ್ಭಿಕವಾಗಿ ನಮ್ಮ ಡೈರೆಕ್ಟರ್ ಹಾಗು ನಾನು ಮತ್ತು ಕೆಲ ಕನ್ನಡಿಗರು ಇವರೊಡನೆ ವಯುಕ್ತಿಕ ಮಾತುಕಥೆಗಳಾಡುತ್ತಿದ್ದೆವು. ಕನ್ನಡದವರು ಕಮ್ಮಿ ಇದ್ದಕಾರಣ, ನಾವು ಕನ್ನಡದ ಒಂದು ಸಣ್ಣ ಗುಂಪು ಮಾಡಿ ಕೊಂಡು ಕನ್ನಡ ಸಾಹಿತ್ಯ ಸಿನೆಮಾ ಈ ತರದ ಮಾತುಕತೆಗಳು ನಡೆಯುತ್ತಿದ್ದವು.

ಕಾರ್ಪೊರೇಟ್ ಜಗತ್ತಲ್ಲಿ, 'lonely up the ladder ' ಅಂತ ಒಂದು ಹೇಳಿಕೆ ಇದೆ. ಅಂದರೆ, ಕಾರ್ಪೊರೇಟ್ ಜಗತ್ತಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾ ಹೋಗುತ್ತಾ ಒಬ್ಬಂಟಿ ಆಗ್ತಾನೆ ಮನುಷ್ಯ ಅಂತ. ಹಾಗೆ, ನಮ್ಮ ಡೈರೆಕ್ಟರ್ ಗೂ ಕೂಡ ಕಚೇರಿಯಲ್ಲೂ ಸ್ನೇಹಿತರು ಅಂತ ಇರಲಿಲ್ಲ. ಅವರ ಸ್ಥಾನಕ್ಕೆ ಅವರು ಎಲ್ಲರೊಡನೆ ಸೀದಾ ಸಾದಾ ಮಾತಾಡಕ್ಕೆ ಆಗ್ತಿರಲಿಲ್ಲ. ಅವರಿಗೆ ಕನ್ನಡ ಪುಸ್ತಕ ಓದೋ ಹವ್ಯಾಸ ತುಂಬಾ ಇದ್ದ ಕಾರಣ ನಾನು ಹಾಗು ನನ್ನ ಸ್ನೇಹಿತರೊಬ್ಬರು ಸ್ವಲ್ಪ ಆತ್ಮೀಯವಾಗಿದ್ದೆವು. ಹೀಗೆ ಮಾತಾಡೋ ಕೆಲವು ದಿನಗಳಲ್ಲಿ ಹೀಗೊಂದು ಕಥೆ ಹೊರಗೆ ಬಂತು.

ಆ ದಿನ ನಾವು ಹೆಣ್ಣು ಗಂಡು ಸಮಾನತೆಯ ವಿಷಯಮಾತಾಡುತ್ತಿದ್ದೆವು. ನಮ್ಮ ಡೈರೆಕ್ಟರ್ ಅವರು ತಮ್ಮ ಒಂದು ಅನುಭವವನ್ನು ಸಂಕೋಚವಾಗೇ ಹಂಚಿಕೊಂಡರು.

ಅವರು ತಮ್ಮ ಐದನೇ ತರಗತಿಯಲ್ಲಿ ಓದುತ್ತಿರುವ ಮಗನಿಗೆ 'ಮೆಸೊಪಟಾಮಿಯಾ ನಾಗರೀಕತೆ'ಯ ಬಗ್ಗೆ ವಿವರಿಸುತ್ತಿದ್ದರಂತೆ. ಏಷ್ಯಾ ಖಂಡದಲ್ಲಿ ಈ ನಾಗರೀಕತೆ ೧೫೦ ಕ್ರಿಸ್ತ ಪೂರ್ವ ಇತ್ತು. ವ್ಯವಸಾಯ ಮತ್ತು ಗಣಿತ ಇಲ್ಲಿಂದಲೇ ಪ್ರಾರಂಭವಾಯಿತು. 'ತಂದೆಯೇ ಮನೆಯ ಯಜಮಾನ' (ಫಾದರ್ ಐಸ್ ದಿ ಹೆಡ್ ಆ ದಿ ಫ್ಯಾಮಿಲಿ ). ಹೀಗೆ ಕೆಲವು ಪಾಯಿಂಟ್ಸ್ ಹೇಳಿದ್ದಾರೆ. ಹೇಳಿ ಮುಗಿಸಿದ ಮೇಲೆ, ಮಗ ಮುಸಿಮುಸಿ ನಕ್ಕಿದ್ದಾನೆ. ಇವರು ಪುಸ್ತಕದಿಂದ ತಲೆ ಎತ್ತಿ ನೋಡಿದ್ದಾರೆ. ಮಗನ ಮುಖದಲ್ಲಿ ಕೆಣಕುವ ಕಿರು ನಗೆ. "ಯಾಕೋ ಮಗ, ನಗ್ತಾ ಇದ್ದೀಯ. ಇದ್ರಲ್ಲಿ ನಗೋ ಅಂತಾದ್ದು ಏನಿದೆ?" ಅಂದಿದ್ದಾರೆ. ಮಗ, "ಅಪ್ಪ, ಮೆಸೊಪಟಾಮಿಯಾ ನಾಗರೀಕತೆ ನಮ್ಮನೇಲಿ ಇಲ್ಲ ಅಲ್ವ ಅಪ್ಪ. ಇಲ್ಲಿ ಅಮ್ಮನೇ ಅಲ್ವ ಮನೆ ಯಜಮಾನಿ!" ಇವರಿಗೆ ಒಂದೆಡೆ ನಗು, ಇನ್ನೊಂದೆಡೆ ಐದನೇ ತರಗತಿಯಲ್ಲಿರೋ ಮಗ ಅದೆಷ್ಟು ಮನೆಯ ವ್ಯವಹಾರ ಮಾತುಕಥೆಗಳನ್ನ ಗಮನಿಸಿದ್ದಾನೆ ಅನ್ನೋ ಆಶ್ಚರ್ಯ. ಮಗನ ನಗುವಿಗೆ ತಮ್ಮದೂ ನಗು ಸೇರಿಸಿ ಪಾಠವನ್ನು ಮುಗಿಸಿದ್ದಾರೆ.

ಇನ್ನೊಂದು ಸಂಧರ್ಭವನ್ನು ಹೇಳಿಕೊಂಡರು. ಅವರು, ಸಂಸಾರ ಸಮೇತ, ತಮ್ಮ ಅಣ್ಣನ ಮನೆಗೆ ಹಳ್ಳಿಗೆ ಹೋಗಿದ್ರಂತೆ. ಅಣ್ಣನ ಮನೆಯಲ್ಲಿ, ಹಿಂದೆ ಇದ್ದಂತೆ ಪುರುಷ ಪ್ರಧಾನ ವ್ಯವಸ್ಥೆ. ಹಾಗಾಗಿ, ಇವರ ಅಣ್ಣ ಹೇಳಿದ್ದೆ ಮಾತು, ನಡೆದದ್ದೇ ದಾರಿ.

ಮನೆ ಹೊರಗೆ ಕೆಲಸದವರು ಅಡಿಕೆ ಕೆಲಸ ಮಾಡ್ತಾ ಇದ್ದರಂತೆ. ನಮ್ಮ ಡೈರೆಕ್ಟರ್ ವರಾಂಡದಲ್ಲಿ ಕೂತು, ಕೆಲಸವನ್ನು ನೋಡುತ್ತಾ , ಒಳಗೆ ಆಡುತ್ತಿದ್ದ ಮಗನಿಗೆ "ದೊಡ್ಡಪ್ಪನ್ನ ಕರಿಯೋ: ಅಂದಿದಾರೆ
ಮಗ: "ಅಪ್ಪ ಅವರು ಮಲಗಿದ್ದಾರೆ"
ಡೈರೆಕ್ಟರ್: "ಎಬ್ಬಿಸು"
ಮಗ: "ಇಲ್ಲಪ್ಪ , ಬೈತಾರೆ ಎಬ್ಬಿಸಿದ್ರೆ, ನಾನು ಎಬ್ಬಿಸಲ್ಲ"
ಡೈರೆಕ್ಟರ್: "ದೊಡ್ಡಮ್ಮಂಗೆ ಹೇಳು, ಎಬ್ಬಿಸಕ್ಕೆ"
ಮಗ: "ಬೇಡಪ್ಪ.. "
ಡೈರೆಕ್ಟರ್: "ಯಾಕೋ?"
ಮಗ: "ಅಪ್ಪ ಇಲ್ಲಿ ನಮ್ಮನೆ ತರ ಅಲ್ಲ.. ಎಲ್ಲ ಉಲ್ಟಾ.. "
ಡೈರೆಕ್ಟರ್: "ಏನೋ ಹಂಗಂದ್ರೆ?"
ಮಗ: "ಎಲ್ಲಕ್ಕೂ ದೊಡ್ಡಪ್ಪ ದೊಡ್ಡಮ್ಮನ್ನ ಬೈತಾರಪ್ಪ"
ಕೆಲಸದವರೆಲ್ಲ ಕಿಸಕ್ಕನ್ನೆ ನಕ್ಕಿದ್ದಾರೆ.. ಇವರು, ಕೆಲಸದವರಿಗೆ ರೇಗಿ " ಗಮನ ಇಟ್ಟು ಸರೀಗೆ ಕೆಲಸ ಮಾಡಿರೋ " ಅಂದು ಎದ್ದು ಬಂದಿದ್ದಾರೆ.

ಎಷ್ಟೋ ವೇಳೆ ಮನುಷ್ಯ ತನ್ನ ವೃತ್ತ್ತಿಜಗತ್ತಿನಲ್ಲಿ ವಯುಕ್ತಿಕ ಬದುಕಿಗಿಂತ ತುಂಬಾ ಭಿನ್ನವಾಗಿ ಇರ್ತಾನೆ.  ಕೆಲವೊಮ್ಮೆ ಜನನ್ನ ನಾವು ಜಡ್ಜ್ ಮಾಡಿಬಿಡ್ತೇವೆ.

ನಮ್ಮ ಸಹುದ್ಯೋಗಿಗಳು, ನಮ್ಮ ಡೈರೆಕ್ಟರ್ ವಯುಕ್ತಿಕ ಬದುಕಿನ ಬಗ್ಗೆ ಊಹಿಸ್ಕೊತಾ ಇದ್ರು. ಇವರ ಜೊತೆ  ಇವರ ಹೆಂಡತಿ ಮಕ್ಕಳು ಹೇಗೆ ಬದುಕ್ತಾರಪ್ಪ ಅಂತ !

ದೀಪದ ಬುಡದಲ್ಲಿ ಯಾವಾಗ್ಲೂ ಕತ್ತಲೇನೆ ತಾನೇ?


Sunday, June 3, 2018

ಕಾಫೀ ವಿರಾಮ

ಐ ಟಿ ಕ್ಷೇತ್ರ ಆಗಲಿ, ನಾನ್ ಐ ಟಿ ಕ್ಷೇತ್ರ ಆಗಲಿ, ಎಲ್ಲ ಉದ್ಯೋಗಿಗಳಿಗೂ ಒಬ್ಬರು ಬಾಸ್ ಅಂತ ಇರ್ತಾರೆ. ಅವರನ್ನ ಮ್ಯಾನೇಜರ್/ ಲೀಡ್/ ಸೂಪರ್ವೈಸರ್ ಅಥವಾ ಡೈರೆಕ್ಟರ್ ಅಂತ ಏನೋ ಒಂದು ಕರೀತಾರೆ. ಬಾಸ್ ಕೆಳಗೆ ಸಾಮಾನ್ಯವಾಗಿ,  ಒಂದು ಅಥವಾ ಜಾಸ್ತಿ ತಂಡಗಳಿರುತ್ತವೆ. ಅದನ್ನ ಟೀಮ್ ಅನಂತ ಕರೀತೀವಿ. ಟೀಮ್ ಅಲ್ಲಿ ಕೆಲಸ ಮಾಡೋರೆಲ್ಲಾ ಆ ಟೀಮ್ ನ  ಟೀಮ್ ಮೆಂಬರ್ಸ್.

ಈ ಬಾಸ್ ಮತ್ತೆ ಟೀಮ್ ಮೆಂಬರ್ ಸಂಬಂಧ ಒಂದು ತರ ಅತ್ತೆ ಸೊಸೆ ಸಂಬಂಧ ಇದ್ದ ಹಾಗೆ. ಇಬ್ಬರೂ ಎಷ್ಟು ಒಳ್ಳೆಯವರಾಗಿದ್ದರೂ, ಅವರ ತಪ್ಪು ಇವರಿಗೆ, ಇವರ ತಪ್ಪು ಅವರಿಗೆ ಚೆನ್ನಾಗಿ ಗೋಚರಿಸುತ್ತೆ. ಕೆಲವರು ಎದುರಾ ಬದುರಾ ಜಗಳ ಮಾಡ್ಕೋತಿದ್ರೆ, ಇನ್ನು ಕೆಲವರು ಸೌಮ್ಯವಾಗಿ ಮುಸುಕಿನ ಗುದ್ದಾಟ ಆಡ್ತಾನೋ, ಅಥವಾ ಶೀಥಲ ಸಮರಾನೋ ಮಾಡ್ತಾ ಇರ್ತಾರೆ. ಎಲ್ಲೋ ಅಪರೂಪಕ್ಕೆ ಪರಸ್ಪರ ಚೆನ್ನಾಗಿರೋ ಮ್ಯಾನೇಜರ್ - ಉದ್ಯೋಗಿ ಸಂಬಂಧಗಳೂ ಇರುತ್ತವೆ.

ಸಾಮಾನ್ಯವಾಗಿ, ಟೀಮ್ ಮೆಂಬರ್ಸ್ ಮನಸ್ಥಿತಿ ಹೇಗಿರುತ್ತೆ ಅಂದ್ರೆ, ಬಾಸ್ ಯಾವಾಗಲೂ ನಮ್ಮ ತಪ್ಪು ಕಂಡು ಹಿಡಿಯುತ್ತಾರೆ. ತಪ್ಪು ಕಂಡು ಹಿಡಿದು, ಬೈತಾರೆ, ಇಲ್ಲ ಅಂದ್ರೆ ಮೌಲ್ಯಮಾಪನದಲ್ಲಿ (ಅಪ್ಪ್ರೈಸಲ್)  ಮತ್ತು ಸಂಬಳ ಪರಿಷ್ಕರಣೆಯಲ್ಲಿ (ಸ್ಯಾಲರಿ ರಿವಿಶನ್)  ಅಲ್ಲಿ ತೊಂದರೆ ಮಾಡ್ತಾರೆ ಅನ್ನೋ ಭಾವ. ಹೀಗಾಗಿ, ಈ ಟೀಮ್ ಮೆಂಬರ್ಗಳು, ಬಾಸ್ ಇಂದ ಆದಷ್ಟು ತಮ್ಮ ತಪ್ಪುಗಳನ್ನ ಮುಚ್ಚಿಡಕ್ಕೆ ನೋಡ್ತಾರೆ ಮತ್ತು ತಾವು ಮಾಡಿದ ಒಳ್ಳೆ ಕೆಲಸಗಳನ್ನು ಎತ್ತಿ ತೋರುವಂತೆ ನಡೆದುಕೊಳ್ತಾರೆ. ಎಲ್ಲರೂ ಹೀಗೆ ಅಂತಲ್ಲ.

ನನ್ನ ಹದಿಮೂರು ವರ್ಷದ ಅನುಭವದಲ್ಲಿ, ಸುಮಾರು ಮೂರು-ನಾಲ್ಕು ಕಂಪನಿ ಬದಲಾಯಿಸಿ ಆಗಿದೆ. ಕಂಪನಿ ಬದಲಾಯಿಸಕ್ಕೆ  ಕಾರಣಗಳು ಅನೇಕ. ನಾ ಕೆಲಸ ಮಾಡುತ್ತಿದ್ದ ಒಂದು ಕಂಪನಿಯಲ್ಲಿ ನಡೆದ ಘಟನೆ.

ದಿನಾ ಉದ್ಯೋಗಿಗಳು ತಮ್ಮದೇ ಗುಂಪು ಮಾಡಿಕೊಂಡು ಊಟ, ಕಾಫೀ/ ಟೀ ಅಂತ ಕೆಫೆಟೇರಿಯಾಗೋ ಅಥವಾ ಹತ್ತಿರದ ದರ್ಶಿನಿಗೋ(ದರ್ಶಿನಿ ಸೌಭಾಗ್ಯ ಇದ್ದಾರೆ)  ಹೋಗ್ತಾರೆ. ನಾವು ಕೂಡ ಹಾಗೆ, ೩-೪ ಜನ ಗುಂಪುಗೂಡಿ ಊಟ, ಕಾಫಿ ಟೀ ಗೆ ಹೋಗ್ತಿದ್ವಿ. ಒಂದು ಅವಧಿಯಲ್ಲಿ ನಮ್ಮ ಗುಂಪಿನಲ್ಲಿ ಯಾರಿಗೂ ತುಂಬಾ ಕೆಲಸ ಇರಲಿಲ್ಲ. ಪ್ರಾಜೆಕ್ಟ್ ಗೆ ನಿಯೋಜಿಇಸಿಲ್ಲದ ಕಾರಣ ಕಚೇರಿಯಲ್ಲಿ ತುಂಬಾ ಬಿಡುವು ಇರ್ತಾ ಇತ್ತು. ಎಷ್ಟು ಹೊತ್ತು ಯಾವುದಾದರೂ ಹೊಸ ವಿಷಯದ ಬಗ್ಗೆ ಓದುವುದು, ತರಬೇತಿ ಪಡೆಯುವುದು? ಹೀಗಾಗಿ, ನಾವು ಊಟದ ವಿರಾಮ, ಟೀ ಕಾಫಿ ವಿರಾಮ ಸ್ವಲ್ಪ ಉದ್ದ ಆಗಿತ್ತು. ಬೆಳಗ್ಗೆ ಸುಮಾರು ಹನ್ನೊಂದಕ್ಕೆ ಕಾಫಿ ಗೆ ಹತ್ತಿರದ ದರ್ಶಿನಿ ಗೆ ಹೋಗೋದು, ಮಧ್ಯಾಹ್ನ ಊಟದ ನಂತರ ಲಘುವಾಗಿ ವಾಕಿಂಗ್ ಹೋಗೋದು, ಮತ್ತೆ ಸಂಜೆ ೪ಕ್ಕೆ ಕಾಫಿ, ಹೀಗೆ ಕಚೇರಿ ಜೀವನ ಆರಾಮಾಗಿ ನಡೆದಿತ್ತು ಸ್ವಲ್ಪ ದಿನ. 

ಈ ತರ ನಾವು ಆರಾಮವಾಗಿ ಸುತ್ತಾಡಕ್ಕೆ ಪ್ರಾರಂಭಿಸಿದ ಮೇಲೆ, ದಿನಾ ನಾವು ಹೊರಗೆ ಹೋಗೋವಾಗ ಇಲ್ಲ ಬರೋವಾಗ ನಮ್ಮ ಬಾಸ್ ದಾರಿಯಲ್ಲೋ, ದರ್ಶಿನಿಯಲ್ಲೋ ಸಿಗಬೇಕೇ?
ನಾವು ಮೊದಮೊದಲು ಗುಡ್ ಮಾರ್ನಿಂಗ್/ಗುಡ್ ಇವಿನಿಂಗ್ ಹೇಳಿ, ಅವರೂ ಕಾಫೀ ಗ ಅಂತೆಲ್ಲ ಕೇಳಿ ಹೋಗೋರು. ದಿನಕ್ಕೆ ಅವರು ಮೂರು ಮೂರು ಸರ್ತಿ ಹೊರಗಡೆ ಭೇಟಿ ಆಗಕ್ಕೆ ಶುರು ಆದಾಗ, ನನ್ನ ಸಹುದ್ಯೋಗಿಗಳಿಗೆ ಅಳುಕು ಕಾಡಕ್ಕೆ ಶುರು ಆಯಿತು. ಅವರೆಲ್ಲ, "ಬಾಸ್ ಸಿಕ್ರೆ ಏನು ಅನ್ಕೋತಾರೆ, ನಾವು ಬರೀ ಹೊರಗೆ ಸುತ್ತುತಾ ಇದೀವಿ ಅನ್ಕೋತಾರೆ. ಕೆಲಸ ಮಾಡ್ತಿಲ್ಲ ಅಂದುಕೊಳಲ್ವ" ಅಂತ ಒಬ್ಬರೆಂದರೆ, ಇನ್ನೊಬ್ಬರು, "ಕೆಲಸ ಇಲ್ಲ ಅಂತ ಅವರಿಗೆ ಗೊತ್ತಿದೆ ಅಲ್ವ, ಯಾಕೆ ಭಯ". ಆದರೂ ಕೆಲವರಿಗೆ ಮನಸ್ಸು ಬರದೇ, ಸಮಯ ಬದಲಾಯಿಸೋಣ ಅಂದುಕೊಂಡು ಸಾಮಾನ್ಯ ಸಮಯಕ್ಕಿಂದ ಅರ್ಧ ಗಂಟೆ ಹಿಂದೆ ಮುಂದೆ  ಮಾಡ್ಕೊಂಡ್ವಿ. ನಮ್ಮ ದುರಾದೃಷ್ಟಕ್ಕೆ  ಅದೂ ವರ್ಕ್ ಆಗಲಿಲ್ಲ. ಕಾರಣಾಂತರದಿಂದ, ನಮ್ಮ ಬಾಸ್ ಸಹ ಸಮಯ ಬದಲಾಯಿಸಿದ್ರೋ ಅಥವಾ ಅವರೂ ಹೊರಗಡೆ ತುಂಬಾ ಹೊತ್ತು (ಕೆಲಸ ಇಲ್ಲದೆ) ಸಮಯ ಕಳೀತಾ ಇದ್ರೋ,  ಮತ್ತೆ ನಾವು ದಾರಿಯಲ್ಲೋ, ದರ್ಶಿನಿಯಲ್ಲೋ ಒಬ್ಬರನ್ನೊಬ್ಬರು ಭೇಟಿ ಮಾಡ್ತಾ ಇದ್ವಿ. ನಾವು ದಾರಿ ಬದಲಾಯಿಸಿದ್ವಿ. ಅದು ಪ್ರಯೋಜನ ಅಗ್ಲಿಲ್ಲ. ನಮ್ಮ ಬಾಸ್ ಜೊತೆ ಹೋಗೋ ಬೇರೆ ಒಬ್ಬರು ಆ ದಾರೀಲಿ ಸಿಗ್ತಾ ಇದ್ರು.
ಎಲ್ಲರಿಗೂ, ಯಾಕೋ ಇದು ನಮ್ಮನ್ನ ತೊಂದರೆಗೆ  ಸಿಕ್ಕಿ ಹಾಕಿಸುತ್ತೆ ಅನ್ನೋ ಭಾವನೆ ಕಾಡಕ್ಕೆ ಶುರು ಆಯಿತು.
ಹೀಗೆ ಒಂದಿನ ನಾವೆಲ್ಲಾ ಮಾತಾಡಿಕೊಳ್ಳುತ್ತಾ ಕಾಫೀ ಕುಡಿದು, ಕಚೇರಿ ಮೆಟ್ಟಿಲು ಹತ್ತೋ ಸಮಯಕ್ಕೆ ನಮ್ಮ ಬಾಸ್ ಎದಿರಾದರು.
ನಾವೆಲ್ಲಾ, ಗುಡ್ ಮಾರ್ನಿಂಗ್ ಹೇಳಿದ್ವಿ. ನಮ್ಮ ಬಾಸ್, " ಏನ್ ಅನಿತಾ , ಕಾಫೀ ಆಯಿತಾ? " ಅಂದ್ರು.
ನಾನು, " ಹೂ ಸಾರ್. ನೀವು ಈಗ ಹೊರಟಿರ?" ಅಂದೆ. ಅವರು, " ಹೌದು ಅನಿತಾ.. ಮತ್ತೆ ಏನ್ ಈ ನಡುವೆ ಬರೀ ಕಚೇರಿ ಇಂದ ಹೊರಗೆ ಇರ್ತೀರಲ್ಲ ಯಾವಾಗ್ಲೂ?" ಅಂದ್ರು
ನಾನು ಪ್ರಯತ್ನಪೂರ್ವಕವಾಗಿ ಯೋಚನೆ ಮಾಡಿ ಉತ್ತರಿಸುವುದಕ್ಕೆ ಮೊದಲೇ, ನನ್ನ ಬಾಯಿ, " ಸಾರ್, ನೀವು ಯಾವಾಗಲೂ ಹೊರಗಡೆನೆ ಸಿಗ್ತಾ ಇದೀರಲ್ಲ!" ಅಂದು ಬಿಡೋದೇ!!

ಎಲ್ಲ ಹೆಹೆಹೆ ಅಂತ ನಕ್ಕರು. ನಾನು, ಮುಂದೆ ನಂಗೆ ಏನು ಕಾದಿದೆಯೋ ಅಂದುಕೊಳ್ಳುತ್ತ ಒಳಗೆ
ನಡೆದೆ.


ಐ ಟಿ ಲೋಕ

ನಮಸ್ಕಾರ!!
ಇದ್ದಕ್ಕಿಂದ್ದಂಗೆ ಇವತ್ತು ಹಳೆ ಚಾಳಿ ಉದ್ಭವ ಆಗಿದೆ. ನನ್ನ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೋಬೇಕು. ಹಂಚಿಕೊಂಡು, ನನ್ನ ಮನಸ್ಸು ಹಗುರ ಮಾಡಿಕೊಂಡು, ನಿಮ್ಮ ಮನಸ್ಸನ್ನೂ ಸ್ವಲ್ಪ ಹಗುರ ಮಾಡಿಸೋ ಬಯಕೆ. 

ನನ್ನ ಲೇಖಕ ಸ್ನೇಹಿತರಿಗೆ ಗೊತ್ತಿರುತ್ತೆ, ಬರೆಯಬೇಕು ಅನ್ನೋ ಹುಚ್ಚು ಹಂಬಲ ಯಾಕೆ ಬರತ್ತೆ ಅಂತ. ನನಗಂತೂ, ಬರೆಯಕ್ಕೆ ಸ್ಪೂರ್ತಿ ಬೇಕು. ಸ್ಪೂರ್ತಿ, ಪ್ರೀತಿ ಪ್ರೇಮ ಇರಬಹುದು, ರೋಷ ದ್ವೇಷ ಇರಬಹುದು. ಇಲ್ಲ ಜೀವನದ ಸವಾಲುಗಳು ಇರಬಹುದು, ಅದು ಲೇಖಕನ ಭಾವಕ್ಕೆ ತಕ್ಕಂತೆ. ಸದ್ಯಕ್ಕೆ ನನಗೆ ಸ್ಪೂರ್ತಿ, ಕಾರ್ಪೊರೇಟ್ ಲೋಕದ ಸವಾಲುಗಳು. 

ನಾನು ಒಬ್ಬ ಬಡಪಾಯಿ ಸಾಫ್ಟ್ವೇರ್ ಕೂಲಿ. ಬಡಪಾಯಿ ಯಾಕೆ, ಕೂಲಿ ಯಾಕೆ ಅಂತ ನನ್ನ ಮುಂದಿನ ಸರಣಿ ಲಲಿತ ಪ್ರಸಂಗಗಳಲ್ಲಿ ಹೇಳುವೆ. 

ಐ ಟಿ ಲೋಕದ ಜನರನ್ನು ಕಂಡರೆ, ನಾನ್ ಐ ಟಿ ಜನಕ್ಕೆ ಒಂದು ತರ ಬೆರಗು ಮತ್ತು  ಅಸೂಯೆ. ಇವರಿಗೇನಪ್ಪಾ, ಕಚೇರಿ ಒಳಗೆ ಕೆಲಸ, ದೊಡ್ಡ ಸಂಬಳ. ಆಗಾಗ ಬೇರೆ ದೇಶ ಸುತ್ತಾಡೋ ಅವಕಾಶ, ವರ್ಕ್ ಫ್ರಮ್ ಹೋಂ. ಇನ್ನೇನು ಬೇಕು ಜೀವನಕ್ಕೆ ಅನ್ನೋ ಭಾವನೆ. 
ಹೌದು, ಇದು ಎಲ್ಲ ನಿಜ. ಯಾವ ಕೆಲಸವೂ ಸುಲಭವಲ್ಲ. ಯಾವ ಕೆಲಸವೂ ಮೇಲಲ್ಲ, ಕೀಳಲ್ಲ. ಎಲ್ಲ ಕೆಲಸದಲ್ಲೂ ಅದರದೇ ಆದ ಪರ - ಅಪರಗಳು ಇರುತ್ತವೆ.  ಯಾವಾಗಲೂ ದೂರದ ಬೆಟ್ಟ ದುಂಡಗೆನೇ ಕಾಣೋದು. ಬನ್ನಿ.. ಹತ್ತಿರ ಹೋಗಿ, ನಿಧಾನವಾಗಿ ನನ್ನ ಕಣ್ಣೋಟದಿಂದ ಪರಿಚಯಿಸ್ತೀನಿ, ಕಷ್ಟನ ಹೇಗೆ ನಗುನಗುತ್ತಾ ಸ್ವೀಕರಿಸುತ್ತಾರೆ ಈ ಐ ಟಿ ಜನ ಅಂತ!  

ಕಾಯ್ತಾ ಇರಿ! ಸದ್ಯದಲ್ಲೇ ಐ ಟಿ ಕಾರ್ಪೊರೇಟ್ ಕಥೆಗಳನ್ನ ತರ್ತೀನಿ. 


ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...