Saturday, August 8, 2015

ಯಾವುದೋ ಗಿರಿಗೆ ಪ್ರಯಾಣ

ನಗಿಸುವುದು ಒಂದು ಕಲೆಯಾದರೆ, ನಗುವುದು ಒಂದು ಕಲೆ ಅನ್ನೋದು ನನ್ನ ಅಭಿಪ್ರಾಯ. ಎಲ್ಲರಿಗೂ ನಗಿಸಕ್ಕೆ ಬರೋಲ್ಲ ಹಾಗೇ ಎಲ್ಲರಿಗೂ ಹಾಸ್ಯ ಅರ್ಥ ಆಗಲ್ಲ.
ನಗಿಸುವುದರಲ್ಲಿ ನಮ್ಮ ಈ ಪುಟ್ಟ ಮಕ್ಕಳದ್ದು ಒಂದು ಕೈ ಮೇಲೇ ಅನ್ನಬಹುದು. ಈಗಿನ ಮಕ್ಕಳಿಗೆ ಬಲು ಬುದ್ಧಿ. ತಮ್ಮ ಜ್ಞಾನದಾಹ, ಕುತೂಹಲ ಹಾಗು ಮುಗ್ಧತೆ ಮಿಶ್ರಿತ ಸವಾಲುಗಳಿಂದ ದೊಡ್ಡವರ ಬೆವರನ್ನು ಸಲೀಸಾಗಿ ಇಳಿಸಬಲ್ಲ ಪುಟಾಣಿಗಿವರು. ಹಾಗೆ, ಅವರ ಮುಗ್ಧತೆಯ ಉತ್ತರಗಳು, ಉಚ್ಛಾರಗಳು ತಲೆತಲಾಂತರಗಳಿಂದ ದೊಡ್ಡವರನ್ನು ನಗಿಸುತ್ತಾ ಬಂದಿದೆ.
ನಮ್ಮ ನಿಮ್ಮ ಮನೆಯ ಪುಟ್ಟ ಪುಟ್ಟಿಯರು ನಮ್ಮೆಲ್ಲರನ್ನು ಹೇಗೆ ನಗಿಸುವರೆಂದು ಈ ಸರಣಿ ಪ್ರಸಂಗಗಳಲ್ಲಿ ನೋಡೋಣ ಬನ್ನಿ!
ಯುಗಾದಿಗೆ ಅಂತ ಮೈಸೂರಿಗೆ ಹೋಗಿದ್ದೆ. ಯುಗಾದಿಯಲ್ಲಿ ವ್ರತ ಗಿತ ಇಲ್ಲದೆ ಇದ್ದಿದ್ದರಿಂದ ಸ್ವಲ್ಪ ಸುತ್ತಾಡಕ್ಕು ಸಮಯ ಇತ್ತು. ನಾನು ಮತ್ತು ನನ್ನ ಕಜ಼ಿನ್, ಬೆಂಗಳೂರಿಂದ ಹೋಗ್ತಾನೆ ಮೈಸೂರಲ್ಲಿ ಎಲ್ಲೆಲ್ಲಿ ಹೋಗಬೇಕು ಅಂತ ಪ್ಲಾನ್ ಮಾಡಿದ್ದೆವು. ಅವನು ತನ್ನ ಹೆಂಡತಿ ಅರ್ಥಾತ್ ನನ್ನ ಕಜ಼ಿನ್ ಇನ್ ಲಾ ಹಾಗು ಮಗಳು ಪುಟ್ಟಿಯನ್ನು ಕರೆದುಕೊಂಡು ನನ್ನನ್ನು ಕರೆದೊಯ್ಯಲು ನಮ್ಮ ಮನೆಗೆ ಬಂದ. ಅದು ಇದು ಮಾತಾಡುತ್ತಾ ಕುಳಿತ ನಮ್ಮನ್ನು ನೋಡಿ, ಇವರನ್ನು ಹೀಗೆ ಬಿಟ್ಟರೆ ಹೊರಗೆ ಹೋಗೋ ಬದಲು ಹರಟೆಯಲ್ಲೆ ಕಾಲ ಕಳೆಯುತ್ತಾರೆ ಎಂದು ಕಳವಳಗೊಂಡ ನಮ್ಮ ಪುಟ್ಟೀ,
"ಅಪ್ಪಾ, ಅದೇನೋ 'ಕಾಂಪ್ಲಾನ್' ತೋರಿಸಕ್ಕೆ ಕರ್ಕೊಂಡ್ ಹೋಗ್ತೀನಿ ಅಂದ್ರಲ್ಲ, ಯಾವಾಗ ಹೋಗದು?" ಅಂದ್ಲು.
ನಾನು ಇದೇನಪ್ಪಾ, ಎಲ್ಲ ಮಕ್ಕಳು ಕಾಂಪ್ಲಾನ್ ಕುಡಿದರೆ, ಈ ನಮ್ ಪುಟ್ಟೀ ನೋಡಿ ಅಷ್ಟಕ್ಕೇ ಸಂತೋಷ ಪಡೋ ಅಂತ ಒಳ್ಳೆ ಮಗುವೇ ಅಂದುಕೊಳ್ಳುತ್ತಿರುವಾಗಲೇ, ನನ್ನ ಕಜ಼ಿನ್, ಅವನ ಹೆಂಡತಿ ಹೋ ಅಂತ ನಗಕ್ಕೆ ಶುರು ಮಾಡಿದ್ರು. ನನ್ನ ಕಜ಼ಿನ್ ಹೆಂಡತಿ,
"ಪುಟ್ಟೀ ಅದು ಕಾಂಪ್ಲಾನ್ ಅಲ್ಲ ಕಂದ, ಅದು Decathlon" ಅಂದಾಗ ನಗೋ ಸರದಿ ನಂದಾಗಿತ್ತು.
(Decathlon ಅನ್ನುವುದು ಒಂದು sports shop)
ಎಲ್ಲಾ Decathlon ಕಡೆ ಸವಾರಿ ಹೊರಟ್ವಿ. ಪುಟ್ಟಿನ ನಾನು ನನ್ನ ತೊಡೆ ಮೇಲೆ ಕೂರಿಸ್ಕೊಂಡು ಅವಳ ಶಾಲೆ ಬಗ್ಗೆ, ಪಾಠದ ಬಗ್ಗೆ ವಿಚಾರಿಸ್ತಾ ಇದ್ದೆ. ಪುಟ್ಟೀನು, ತುಂಬಾ ಉತ್ಸಾಹದಿಂದ ಹೇಗೆ ಅವಳು ಪ್ರಾರ್ಥನೆ ಬರದೆ ಇದ್ದರೂ, ಒಣ ಒಣ ಅಂತ ತುಟಿ ಅಲ್ಲಾಡಿಸಿ ಪ್ರಾರ್ಥನೆಯ ನಾಟಕ ಮಾಡ್ತಾಳೆ, ಅವಳಿಗೆ ಯಾವ ಸ್ಪರ್ಧೆಯಲ್ಲಿ ಎಷ್ಟನೇ ಬಹುಮಾನ ಅಂತ ವಿವರಿಸ್ತಾ ಇದ್ದಳು.
ನಾನು ನಮಗೆ ಒಂದನೇ ತರಗತಿಯಲ್ಲಿ ಕನ್ನಡದಲ್ಲಿ ಯಾವ ಪದ್ಯ ಎಂದು ನೆನೆಸಿಕೊಳ್ಳುತ್ತಾ,
"ಪುಟ್ಟೀ, ಕನ್ನಡದಲ್ಲಿ ಯಾವ ಪದ್ಯ ಇದೆ?" ಎಂದು ಕೇಳಿದೆ. ಕಾಂಪ್ಲಾನ್ ಕುಡಿದೋಳ ಥರ ಉಚ್ಛ ಸ್ವರದಲ್ಲಿ 'ಏರುತಿಹುದು ನಮ್ಮ ಬಾವುಟ' ಹಾಡಿ ಮುಗಿಸಿದಳು. ನನ್ನ ತಲೆಯಲ್ಲೋ ಯಾರು ಇದನ್ನು ಬರೆದ ಕವಿ ಎಂದು ಕೊರೆಯುತ್ತಿತ್ತು. ಅವಳಿಗೆ,
"ಇದನ್ನು ಯಾರಮ್ಮಾ ಬರೆದಿರೋದು" ಅಂತ ಒಂದು ಪೆದ್ದ ಪ್ರಶ್ನೆ ಕೇಳಿದೆ ನೋಡಿ, ತಟಕ್ಕನೆ ನಮ್ಮ ಪುಟಾಣಿ, "ಅದನ್ ಯಾರು ಬರೆದಿಲ್ಲ.. ಅದು ಪ್ರಿಂಟ್ ಮಾಡಿರದು" ಅಂದಾಗ ನಾನು ಒಂದು ಕಡೆ ಕಕ್ಕಾಬಿಕ್ಕಿ ಇನ್ನೊಂದು ಕಡೆ ನಗು. ಆಮೇಲೆ ಮಗುವಿಗೆ ಅದಕ್ಕೆ ಅರ್ಥ ಆಗೋ ಭಾಷೆಯಲ್ಲಿ ಅವಳ ಅಮ್ಮ ಬರೆದವರ ಬಗ್ಗೆ ವಿವರಿಸಿದ್ದಾಯಿತು.
ಇದಾದ ಮೇಲೆ ನಮ್ಮ ಪುಟ್ಟಿ ಗುಣಗಾನ ನನ್ ಕಜ಼ಿನ್ ಮಾಡಿದ. ಒಂದು ದಿನ,ಪುಟ್ಟಿ ಅಪ್ಪ ಅಮ್ಮ ಇಬ್ಬರೂ ಯಾರೋ ನೆಂಟರ ಮನೆಗೆ ಹೋಗಬೇಕಿತ್ತಂತೆ. ಪುಟ್ಟಿನ ಮನೆಯಲ್ಲೆ ಅಜ್ಜಿ ಜೊತೆ ಬಿಟ್ಟು ಹೋಗಿದಾರೆ. ನಮ್ಮ ಪುಟ್ಟಿದು ಸ್ವಲ್ಪ ಯಜಮಾನಿಕೆ ಜಾಸ್ತಿನೇ. ಇವಳ ಅಪ್ಪನನ್ನು ಹುಡುಕಿಕೊಂಡು ಯಾರೋ ಮನೆಗೆ ಬಂದಿದಾರೆ. ಅಜ್ಜಿ ಒಳಗೆ ಅಡುಗೆ ಮಾಡ್ತಿದಾರೆ. ಮಗುನ ಬಂದವರು ಮಾತಾಡಿಸಿ,"ಎಲ್ಲಿ ಪುಟ್ಟೀ, ನಿಮ್ಮ ಅಪ್ಪ?" ಎಂದು ಕೇಳಿದಾರೆ.
ಅವಳೋ "ಅವರೂ, ಯಾವ್ದೋ ಗಿರಿಗೆ ಹೋಗಿದಾರೆ".
ಬಂದವರು, ಇವಳು ಏನು ಹೇಳ್ತಾ ಇದಾಳೆ ಅಂತ ಅರ್ಥವಾಗದೆ, "ಏನು" ಎಂದು ಮತ್ತೆ ಕೇಳಿದಾರೆ.
ಅವಳು ಮತ್ತೆ, "ಅವರು ಯಾವ್ದೋ ಗಿರಿಗೆ ಹೋಗಿದಾರೆ ಅಂದನಲ್ಲ" ಅಂತ ಒಳ್ಳೆ ದೊಡ್ಡವರು ಮಾತಾಡೋ ಧಾಟಿಯಲ್ಲಿ ಹೇಳಿದಾಳೆ. ಬಂದವರು, ಇದೇನು ಈ ಮಗು ಈ ವಯಸ್ಸಿಗೆ ಎಂಥ ಒಳ್ಳೆ ಕನ್ನಡ ಮಾತಾಡುತ್ತೆ. ಅಪ್ಪ ಯಾವುದೋ Hill station ಗೆ ಹೋಗಿದಾರೆ ಅಂತ ಎಷ್ಟು ಚೆನ್ನಾಗಿ ಅಚ್ಚ ಕನ್ನಡದಲ್ಲಿ ಹೇಳುತ್ತೆ ಅಂದುಕೊಳ್ಳುತ್ತಿರುವ ಹಾಗೆ ಅವಳ ಅಜ್ಜಿ ಹೊರಗೆ ಬಂದಿದಾರೆ.
"ಆಂಟಿ, ಎಲ್ಲಿ ಹೋಗಿದಾನೆ ನಿಮ್ ಮಗ? ಊಟಿನೋ, ಕೊಡಾಯ್ ಒ?"
ಅವಳ ಅಜ್ಜಿ, "ಇಲ್ಲೆ ಇದಾನಾಲ್ಲಪ್ಪ. ನಿಂಗೆ ಯಾರು ಹೇಳಿದ್ರು ಊರಲ್ಲಿಲ್ಲ ಅವನು ಅಂತ?"
ಬಂದವರು: "ಮತ್ತೆ ಪುಟ್ಟೀ ಅಂದ್ಲು, ಯಾವುದೋ ಗಿರಿಗೆ ಹೋಗಿದಾರೆ ಅಂತ. ನಾನು Hill station ಗೆ
ಹೋಗಿರಬೇಕು ಅನ್ಕೊಂಡೆ" ಅಂದಾಗ ಅಜ್ಜಿ ಜೋರಾಗಿ ನಗಕ್ಕೆ ಶುರು ಮಾಡಿದ್ರಂತೆ.
ಏನಪ್ಪಾ ವಿಷಯ ಅಂದ್ರೆ, ಪುಟ್ಟೀ ಅಪ್ಪ ಅಮ್ಮ 'ಯಾದವ ಗಿರಿ' ಹೋಗಿದ್ರೆ, ಪುಟ್ಟೀ ಅವರನ್ನ ಯಾವುದೋ ಗಿರಿಗೆ ಕಳಿಸಿದ್ಲು. ನಾವೆಲ್ಲ ಪುಟ್ಟೀ ಕಥೆ ಕೇಳಿ ನಕ್ಕಿದ್ದೇ ನಕ್ಕಿದ್ದು!

Thursday, August 6, 2015

ನಿಂದೆ

ಕಾಡುವ
ನೆನಪು
ನಿನದೇ
ನನ್ನ
ಕಾದಿಡುವ
ನೆನಪೂ
ನಿನದೇ

Wednesday, August 5, 2015

ಖಾಲಿ

ನಲ್ಲ
ನೀನಿಲ್ಲದ
ಬಾಳಲ್ಲಿ
ಏನಿಲ್ಲ?!
ಎಲ್ಲವೂ
ಇದೆ
ಆದರೆ
ನೀನಿಲ್ಲ!

Wednesday, July 29, 2015

ಬಿಳುಪು

ಎಂಥಾ ಶುಭ್ರತೆ
ಅದೇನು ಹೊಳಪು!
ನಿರ್ಮಲ
ನಿಷ್ಕಲ್ಮಷ
ಮುಗ್ಧತೆಗಳ
ಸಂಕೇತವೇ?

ತನ್ನ ರಂಗುಗಳ ಬಚ್ಚಿಟ್ಟು
ಒಳಗಿನ ಹುಳುಕುಗಳನ್ನು
ಮರೆಮಾಚಿ
ಮೋಡಿ ಮಾಡುವ
ಮಾಯೆಯೋ?

Sunday, June 28, 2015

ವಿಜಯ ಮಂತ್ರ

ನಂಬಿದರೆ
ಸಾಮರ್ಥ್ಯ
ನಂಬದಿರೆ
ಪ್ರಯತ್ನಗಳೆಲ್ಲಾ
ವ್ಯರ್ಥ!

Saturday, June 13, 2015

'ವರ'


ದೇ'ವರ'
ನಂಬಲು
'ವರ'
ಕೊಡಬೇಕಲ್ಲವೇ
ಅವನು!!

Saturday, May 23, 2015

ಪದಬಂಧದ ಪ್ರಬಂಧ

ನಾವು ಸಣ್ಣವರಿದಾಗ ಕಲಿತ ಅಭ್ಯಾಸಗಳು ಅಷ್ಟು ಸುಲಭವಾಗಿ ಬಿಡುವುದಕ್ಕೆ ಆಗದು. ಅಷ್ಟಿಲ್ಲದೆ ತಿಳಿದವರು 'ಹುಟ್ಟು ಗುಣ ಸುಟ್ಟರೂ ಹೋಗಲ್ಲ' ಎಂದು ಹೇಳುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕಲಿಸುವುದು ತುಂಬಾ ಮುಖ್ಯ. ಹಾಗಂತ ಹೇಳುವಾಗ ಇನ್ನೊಂದು ಗಾದೆ ನೆನಪಿಗೆ ಬರುತ್ತಿದೆ. 'ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ?'. ಕೆಲವೊಂದು ಅಭ್ಯಾಸ, ವಿದ್ಯೆಗಳು, ದೊಡ್ಡವರಾದ ಮೇಲೆ ಕಲಿಯುವುದು ಕಷ್ಟ.

ನನ್ನ ಅನುಭವದಲ್ಲಿ ಹೇಳುವುದಾದರೆ, ನಾನು ಸಣ್ಣವಳಿದ್ದಾಗಿನಿಂದ ತುಂಬಾ ಆಟಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಜುವುದ ಮಾತ್ರ ಕಲಿಯಲಿಲ್ಲ. ಈಗ ಸುಮಾರು ಐದು ವರ್ಷಗಳಿಂದ ಎಷ್ಟು ಪ್ರಯತ್ನ ಪಟ್ಟರೂ ಸರಿಯಾಗಿ ಈಜು ಕಲಿಯುವುದಕ್ಕೆ ಆಗಿಲ್ಲ. ಯಾಕೆ ಈ ಅಭ್ಯಾಸಗಳ ಬಗ್ಗೆ ಹೇಳುವುದಕ್ಕೆ ಹೊರಟೆ ಎಂದರೆ, ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ ಪದಬಂಧ ಮಾಡುವ ಅಭ್ಯಾಸ ಮಾಡಿಸಿದ್ದರು. ದಿನಾ, ಬೆಳಗ್ಗೆ ಪದಬಂಧ ಮಾಡಿಲ್ಲ ಅಂದ್ರೆ ನನಗೆ ಒಂದು ರೀತಿಯ ಹಿಂಸೆ ಆಗುತ್ತಿರುತ್ತೆ. ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ ಕೈ ಗುರುಗುಡುತ್ತೆ!

ಪದಬಂಧ ಮಾಡುವುದು ಒಂದು ಒಳ್ಳೆ  ಹವ್ಯಾಸ. ಯಾಕಪ್ಪ ಅಂದರೆ ಪದಬಂಧ ಮಾಡುವುದಕ್ಕೆ ಸಮಸ್ಯೆ ಬಿಡಿಸುವ  ಕೌಶಲ್ಯವಿರಬೇಕು. ಸಮಸ್ಯೆ ಬಿಡಿಸುವುದನ್ನು ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಒಂದು ಜೀವನ ಕೌಶಲ್ಯವೆಂದು ಗುರುತಿಸಿದೆ. ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಅವರು ಇನ್ನು ಹತ್ತು ಜೀವನ ಕೌಶಲ್ಯಗಳನ್ನು ಗುರುತಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನು ಮಾನಸಿಕವಾಗಿ ಆರೋಗ್ಯವಾಗಿ, ನೆಮ್ಮದಿಯಾಗಿ ಇರಲು ಈ ಕೌಶಲ್ಯಗಳು ನೆರವಾಗುತ್ತವೆ.

ನೀವು ಪದಬಂಧ ಮಾಡಿದ್ದರೆ ನಿಮಗೆ ಈ ಅನುಭವಗಳು ಆಗಿರಬಹುದು. ಪದಬಂಧ ಮಾಡಲು ಕೆಲವು ಸೂಚನೆಗಳಿರುತ್ತವೆ.
'ಎಡದಿಂದ ಬಲಕ್ಕೆ' ಹಾಗು 'ಮೇಲಿನಿಂದ ಕೆಳಕ್ಕೆ' ಎಷ್ಟು ಅಕ್ಷರ ಹಾಗು ಯಾವ ಪದ ಎನ್ನುವುದಕ್ಕೆ ಸುಳಿವು ಕೊಟ್ಟಿರುತ್ತಾರೆ.  ಪದಗಳು ಇಂತದ್ದೆ ಅನುಕ್ರಮದಲ್ಲಿ ಬಿಡಿಸಬೇಕು ಎನ್ನುವ ನಿಯಮವೇನೂ ಇಲ್ಲ. ಯಾವ ಪದ ಬೇಕಾದರೂ ಮೊದಲು ಬಿಡಿಸಬಹುದು.

ಸಾಮಾನ್ಯವಾಗಿ, ಜನ ಎಡದಿಂದ ಬಲಕ್ಕೆ ಕೊಟ್ಟಿರುವ ಒಂದೊಂದು ಪದಗಳ ಸೂಚನೆಯನ್ನು ಓದುತ್ತಾ ಹೊಗುತ್ತಾರೆ. ಯಾವುದಾದರು ಪದ ಹೊಳೆದರೆ, ಅದನ್ನು ಪದಬಂಧದ ಚೌಕಗಳಲ್ಲಿ ಬರೆಯುತ್ತಾರೆ. ಉತ್ತರ ಸಿಕ್ಕಿದ ಅಕ್ಕ ಪಕ್ಕ, ಮೇಲೆ ಕೆಳಗೆ ಬರುವ ಪದಗಳ ಸೂಚನೆಯನ್ನು ಓದಿ, ಆ ಪದ ಹೊಳೆಯುತ್ತದೆಯೇ ಪ್ರಯತ್ನಿಸುತ್ತಾರೆ. ಅದು ಹೊಳೆದರೆ, ಮತ್ತೆ ಅದರ ಅಕ್ಕ ಪಕ್ಕ , ಮೇಲೆ ಕೆಳಗೆ, ಹೀಗೆ ಸಮಸ್ಯೆ ಬಿಡಿಸುವ ಪ್ರಕ್ರಿಯೆ ಮುಂದುವರೆಯುತ್ತದೆ.

ಮೇಲ್ನೋಟಕ್ಕೆ ಇದು ನಮಗೆ ತಿಳಿದಿರುವ ಶಬ್ದ ಬಂಢಾರದ ಪರೀಕ್ಷೆಯೇನಿಸಿದರೂ, ಇದು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಜೀವನದಲ್ಲಿ ದಿನನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೆ ಸಮಸ್ಯೆ ಬಿಡಿಸುವ ಕೌಶಲ್ಯವಿದ್ದಾರೆ ಜೀವನ ಸರಾಗ. ಸಮಸ್ಯೆ ಒಂದು ರೀತಿ ಗಂಟುಗಳ ಹಾಕಿಕೊಂಡ ಸರವಿದ್ದ ಹಾಗೆ. ಎಲ್ಲೋ ಒಂದು ಕಡೆ ಸರದ ಒಂದು ಗಂಟನ್ನು ಮೊದಲು ಬಿಡಿಸಬೇಕು.ನಂತರ ಮತ್ತೊಂದು, ಇನ್ನೊಂದು. ಒಂದೊಂದಾಗಿ ಎಲ್ಲ ಗಂಟುಗಳನ್ನೂ  ಬಿಡಿಸಿದರೆ, ಸರದ ಸಮಸ್ಯೆ ಬಗೆ ಹರಿಯುತ್ತದೆ. ಹಾಗೆ ಈ ಪದಬಂಧ. ನಾನು ಮೂರನೇ ಪದ ಮೊದಲು ಬಿಡಿಸಿದರೆ, ನೀವು ಅದನ್ನು ಕೊನೆಗೆ ಬಿಡಿಸಬಹುದು. ಒಬ್ಬಬ್ಬರದ್ದು ಒಂದೊಂದು ಅನುಕ್ರಮವಿರಬಹುದು. ಗುರಿ ಮಾತ್ರ ಪೂರ್ತಿ ಪದಬಂಧ ಮಾಡುವುದು. ಒಟ್ಟು, ಪದಬಂಧ ಮಾಡುವುದರಿಂದ ನಾವು ಸಮಸ್ಯೆ ಬಿಡಿಸುವ ಕೌಶಲ್ಯವನ್ನು ಕಲಿಯುತ್ತೇವೆ. ಈ ಕೌಶಲ್ಯ ಪರೋಕ್ಷವಾಗಿ ನಮ್ಮ ಜೀವನದಲ್ಲಿ ದಿನ ನಿತ್ಯ ಸಹಾಯವಾಗುತ್ತದೆ.

ಎಲ್ಲ ಪದಗಳೂ ನನಗೊಬ್ಬಳಿಗೆ ಹೊಳೆಯುತ್ತದೆ ಎಂದು ಹೆಳಲಾಗದು. ನನಗೆ ಹೊಳೆಯದಿದ್ದಾಗ ನಾನು ನಮ್ಮ ಮನೆಯಲ್ಲಿ ಅಮ್ಮ ಅಪ್ಪನನ್ನೂ, ಅಣ್ಣನನ್ನೋ ಮತ್ಯಾರನ್ನೋ ಕೇಳುವೆ. ಅದರಿಂದ ನನ್ನ ಪದಬಂಧ ವೇಗವಾಗಿ ಸಾಗುತ್ತದೆ ಮತ್ತು ಸಂಪೂರ್ಣಗೊಳಿಸಲು ಸಹಾಯವಾಗುತ್ತದೆ. ಇದು ನಮಗೆ ಒಗ್ಗಟ್ಟಿನಲ್ಲಿ ಹೆಚ್ಚು ಬಲ ಎಂಬುದನ್ನು ಮನದಟ್ಟು ಮಾಡುತ್ತದೆ. ಸಮಸ್ಯೆಗಳು ಬಂದಾಗ ನಮಗೆ ಸಮಸ್ಯೆ ನಿವಾರಿಸಿಕೊಳ್ಳುವ ಬಲವಿರದಿದ್ದಾಗ ಮನೆಯವರ, ಸ್ನೇಹಿತರ ಸಹಾಯ ಕೇಳುವ ಮನೋಭಾವ, ಹಾಗೆ ಸಹಾಯ ಹಸ್ತ ನೀಡುವ ಮನೋಭಾವವನ್ನು ಹುಟ್ಟು ಹಾಕುತ್ತದೆ.

ನೀವು ಪದಬಂಧ ಮಾಡ್ತೀರಲ್ಲ ಇವತ್ತಿಂದ? ನಿಮ್ಮ ಮಕ್ಕಳಿಗೂ ಅಭ್ಯಾಸ ಕಲಿಸುತ್ತೀರಲ್ಲ?




ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...